ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸೇವೆಯನ್ನು ಪುರಸ್ಕರಿಸಿ ಹಿರಿಯ ನಟಿ ಹರಿಣಿ ಅವರಿಗೆ 2015ನೇ ಸಾಲಿನ ‘ಡಾ. ರಾಜಕುಮಾರ್ ಪ್ರಶಸ್ತಿ’ ಪ್ರಕಟಿಸಲಾಗಿದೆ. ‘ಪುಟ್ಟಣ್ಣ ಕಣಗಾಲ್’ ಪ್ರಶಸ್ತಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ಗೆ ಸಂಗೀತ ನಿರ್ದೇಶಕ ರಾಜನ್ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ಎರಡು ಲಕ್ಷ ರೂಪಾಯಿ ನಗದು ಮತ್ತು ಐವತ್ತು ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಪ್ರಶಸ್ತಿಗಳ ಆಯ್ಕೆಗಾಗಿ ನಿರ್ದೇಶಕ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ತಮ್ಮ ವೃತ್ತಿ ಜೀವನದದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದ ಹರಿಣಿ, ‘ಜಗನ್ಮೋಹಿನಿ’, ‘ಕನ್ಯಾದಾನ’, ‘ನಾಂದಿ’ ಚಿತ್ರಗಳ ಮೂಲಕ ಚಿತ್ರರಸಿಕರ ಗಮನ ಸೆಳೆದಿದ್ದರು. ‘ಉಂಡೂ ಹೋದ ಕೊಂಡೂ ಹೋದ’ ಚಿತ್ರದ ಮೂಲಕ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ ಈವರೆಗೆ 13 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕ ರಾಜನ್ ಅವರು ಸಹೋದರ ನಾಗೇಂದ್ರ ಜತೆಗೂಡಿ ಸುಮಾರು 175 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
* ಈ ಪ್ರಶಸ್ತಿ ಸೇರಿದಂತೆ ಎಲ್ಲ ಪುರಸ್ಕಾರಗಳ ಶ್ರೇಯ ಶ್ರೋತೃಗಳಿಗೆ ಸಲ್ಲುತ್ತದೆ. ಜನರು ನಮ್ಮ ಚಿತ್ರಗಳ ಹಾಡುಗಳನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂಬುದೇ ಖುಷಿಯ ಸಂಗತಿ.
–ರಾಜನ್ , ಸಂಗೀತ ನಿರ್ದೇಶಕ