ಸಾಗರ: ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಅವರನ್ನು ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ವಿಭಾಗದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಿವೃತ್ತ ನೌಕರರ ಸಂಘ ಸೋಮವಾರ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಸಮಾಜದಲ್ಲಿ ಹಿರಿಯರಿಗೆ ಗೌರವ ದೊರಕುವುದಿಲ್ಲವೋ ಅಂತಹ ಸಮಾಜ ಅವನತಿಯತ್ತ ಸಾಗಿದೆ ಅಂತಲೇ ಅರ್ಥ. ಹಿರಿಯ ನಾಗರಿಕರು ಘನತೆ ಹಾಗೂ ಗೌರವದಿಂದ ಬದುಕುವ ವಾತಾವರಣ ಸೃಷ್ಟಿಸುವುದು ಮುಖ್ಯ ಎಂದು ಹೇಳಿದರು.
ಮನೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಹಿರಿಯರಲ್ಲಿ ಅನಾಥ ಪ್ರಜ್ಞೆ ಕಾಡದಂತೆ ನೋಡಿಕೊಳ್ಳಬಹುದು ಎಂದರು.
ಹಿರಿಯ ನಾಗರಿಕರ ಪರವಾಗಿ ರಾಮಪ್ಪ ಮಾತನಾಡಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್. ಬಸವರಾಜ್ ಮಾತನಾಡಿ, ಹಿರಿಯ ನಾಗರಿಕರ ಕುಂದು ಕೊರತೆಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದರು.
ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳ ಕುರಿತು ವಕೀಲ ಕೆ.ಎನ್. ಶ್ರೀಧರ್ ಉಪನ್ಯಾಸ ನೀಡಿದರು.
ನ್ಯಾಯಾಧೀಶರಾದ ಸತೀಶ್ ಜೆ. ಬಾಳಿ, ಐ.ಪಿ. ನಾಯಕ್, ವಕೀಲರ ಸಂಘದ ಅಧ್ಯಕ್ಷ ಎಚ್.ಕೆ. ಅಣ್ಣಪ್ಪ, ವಕೀಲ ಎಂ.ಬಿ. ಪುಟ್ಟಸ್ವಾಮಿ ಹಾಜರಿದ್ದರು.
ಸಹನಾ ಜಿ. ಭಟ್ ಪ್ರಾರ್ಥಿಸಿದರು. ವಿ. ಶಂಕರ್ ಸಂಗಡಿಗರು ನಾಡಗೀತೆ ಹಾಡಿದರು. ರವೀಶ್ ಸ್ವಾಗತಿಸಿದರು. ಉಮೇಶ್ ಹಿರೇನೆಲ್ಲೂರು ವಂದಿಸಿದರು.ಎಂ. ಗಣಪತಿ ಕಾರ್ಯಕ್ರಮ ನಿರೂಪಿಸಿದರು.