ಧಾರವಾಡ: ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಸೋಮ ವಾರ ನಡೆದ ಅಖಿಲ ಭಾರತ ಆಹ್ವಾನಿತ ಮಹಿಳಾ ಹಾಕಿ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಹಿರಿಯ ಹಾಕಿ ಆಟಗಾರರಾದ ಬೀನು ಭಾಟ್ ಮತ್ತು ಜಿ.ಸುಜಾತಾ ಅವರನ್ನು ಸನ್ಮಾನಿಸಲಾಯಿತು.
ಭಾರತ ರಾಷ್ಟ್ರೀಯ ಹಾಕಿ ತಂಡದ ಆಟಗಾರರಾಗಿದ್ದ ಬೀನು ತಮ್ಮ ಯೌವನದ ದಿನಗಳಲ್ಲಿ ಹಾಕಿ ಕ್ರೀಡೆ ಕಂಡ ಸುವರ್ಣ ದಿನಗಳ ಮೆಲುಕು ಹಾಕಿದರು. ಮೇಜರ್ ಧ್ಯಾನಚಂದ್ ಹೆಸರಲ್ಲಿ ನಡೆದ ಟೂರ್ನಿಯಲ್ಲಿ ತಮ್ಮನ್ನು ಸನ್ಮಾನಿಸಿದ್ದಕ್ಕೆ ಮಾಜಿ ಹಾಕಿಪಟು ಸುಜಾತಾ ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಕ್ರೀಡಾಪಟುಗಳು ನಗರದಲ್ಲಿ ಧ್ಯಾನಚಂದ್ ಅವರ ಭಾವಚಿತ್ರದ ಮೆರವಣಿಗೆ ಮಾಡಿದರು.