ಕಾರ್ಕಳ: ತಾಲ್ಲೂಕಿನ ಹಿರ್ಗಾನ ಕಾರ್ಯಕ್ಷೇತ್ರದ ಸಾಧು ಶೆಟ್ಟಿಗಾರ್ ಮನೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತರಿಗಾಗಿ ಬುಧವಾರ ಶ್ರೀಅಭಿಯಾನ ಪ್ರಾತ್ಯಕ್ಷಿಕೆ ನಡೆಯಿತು.
ಯೋಜನಾಧಿಕಾರಿ ಸಂಜೀವ ನಾಯಕ್ ಪ್ರಾತ್ಯಕ್ಷಿಕೆ ಉದ್ಘಾಟಿಸಿದರು.
ಅಭಿಯಾನದ ಯೋಜನಾಧಿಕಾರಿ ವಿಜಯ್ ಕುಮಾರ್ ನಾಗನಾಳ ಭತ್ತವನ್ನು ಕಡಿಮೆ ಖರ್ಚಿನಲ್ಲಿ ಕನಿಷ್ಠ ಬೀಜದಿಂದ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸಸಿಮಡಿ ತಯಾರಿ, ನಾಟಿ ಗದ್ದೆ ತಯಾರಿ, ಸಸಿಗಳ ನಾಟಿ ವಿಧಾನ, ನೀರು ನಿರ್ವಹಣೆ, ಕಳೆ ನಿಯಂತ್ರಣ, ರಸ ಗೊಬ್ಬರಗಳ ಬಳಕೆ, ಕೀಟ ರೋಗ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ಯೋಜನೆಯ ಕೃಷಿ ಅಧಿಕಾರಿ ಸುಧೀರ್ ಜೈನ್, ನಬಾರ್ಡ್ ಬೆಂಗಳೂರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಡೆಯುವ ಶ್ರೀ ಅಭಿಯಾನದ ಪರಿಚಯ ಮಾಡಿಕೊಟ್ಟರು.
ಒಕ್ಕೂಟದ ಅಧ್ಯಕ್ಷ ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರು, ಸಾಧು ಶೆಟ್ಟಿಗಾರ್, ಸೇವಾನಿರತೆ ಉಷಾ, ರೇಷ್ಮಾ ಇದ್ದರು. 58 ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.