ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಸ್ಸಾರ್:ಅಣ್ಣಾ ಗಾಳಿಗೆ ನೆಲ ಕಚ್ಚಿದ ಕಾಂಗ್ರೆಸ್

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಹರಿಯಾಣದ ಹಿಸ್ಸಾರ್ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ನೆಲಕಚ್ಚಿದ್ದರೆ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ವಿಧಾನಸಭಾ ಸ್ಥಾನಕ್ಕಾಗಿ ನಡೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಥವಾ ಅದರ ಮಿತ್ರಪಕ್ಷಗಳು ಜಯ ಗಳಿಸಲು ವಿಫಲವಾಗಿದ್ದು ತೀವ್ರ ಹಿನ್ನಡೆ ಅನುಭವಿಸಿವೆ.

ಪ್ರತಿಷ್ಠಿತ ಹರಿಯಾಣದ ಹಿಸ್ಸಾರ್ ಲೋಕಸಭಾ ಉಪ ಚುನಾವಣೆಯಲ್ಲಿ ಜನಹಿತ್ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಗೆದ್ದಿದ್ದಾರೆ. ಅಣ್ಣಾ ಹಜಾರೆ ತಂಡದವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬಾರದೆಂದು ಇಲ್ಲಿ ತೀವ್ರ ಪ್ರಚಾರ ನಡೆಸಿದ್ದರಿಂದ ದೇಶದಾದ್ಯಂತ ಗಮನ ಸೆಳೆದಿತ್ತು.

ಮಹಾರಾಷ್ಟ್ರದಲ್ಲಿ ಪುಣೆ ಜಿಲ್ಲೆಯ ಖಡಕ್‌ವಾಸ್ಲಾ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭೀಮರಾವ್ ತಪಕಿರ್ ಆಯ್ಕೆಯಾಗಿದ್ದಾರೆ.

ಇದರಿಂದ ಕಾಂಗ್ರೆಸ್-ಎನ್‌ಸಿಪಿ ಸಮ್ಮಿಶ್ರ ಸರ್ಕಾರ ಅದರಲ್ಲೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಿನ್ನಡೆಯಾದಂತಾಗಿದೆ. ಬಿಹಾರದ ದರೌಂಡಾದಲ್ಲಿ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಅಭ್ಯರ್ಥಿ ಕವಿತಾಸಿಂಗ್ ಮತ್ತು ಆಂಧ್ರಪ್ರದೇಶದ ಬಾಣಸವಾಡಾದಲ್ಲಿ ಟಿಆರ್‌ಎಸ್ ಅಭ್ಯರ್ಥಿ ಪೊಚಾರಾಮ ಶ್ರೀನಿವಾಸರೆಡ್ಡಿ ಜಯ ಸಾಧಿಸಿದ್ದಾರೆ.

ಹಿಸ್ಸಾರ್ ವರದಿ(ಪಿಟಿಐ):  ಹಿಸ್ಸಾರ್ ಲೋಕಸಭಾ ಉಪಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಎಚ್‌ಜೆಸಿ- ಬಿಜೆಪಿ ಮಿತ್ರಕೂಟ ಅಭ್ಯರ್ಥಿ ಕುಲದೀಪ್ ಬಿಷ್ಣೋಯಿ ಜಯ ಗಳಿಸಿದ್ದರೆ ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಕಾಂಗ್ರೆಸನ್ನು ಶತಾಯಗತಾಯ ಮೂಲೆಗುಂಪಾಗಿಸಲು ಅಣ್ಣಾ ತಂಡವು ಇಲ್ಲಿ ತೀವ್ರ ಆಂದೋಲನ ನಡೆಸಿತ್ತು.
ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆದಿದ್ದು ಅವರ ಪುತ್ರ ಬಿಷ್ಣೋಯಿ (42) ಹರಿಯಾಣ ಜನಹಿತ ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಉಳಿಸಿಕೊಟ್ಟಿದ್ದಾರೆ. ಇವರು ತಮ್ಮ ಸಮೀಪ ಪ್ರತಿಸ್ಪರ್ಧಿ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲ ಅವರ ಪುತ್ರ ಐಎನ್‌ಎಲ್‌ಡಿಯ ಅಜಯ್‌ಸಿಂಗ್ ಚೌತಾಲ (50) ಅವರನ್ನು ಮತ ಚಲಾವಣೆಯಾದ ಒಟ್ಟು 9 ಲಕ್ಷದ ಪೈಕಿ 6,323 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಆಡಳಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಹಿಸ್ಸಾರ್‌ನಿಂದ ಮೂರು ಬಾರಿ ಸಂಸದರಾಗಿರುವ ಮಾಜಿ ಕೇಂದ್ರ ಸಚಿವ ಜೈ ಪ್ರಕಾಶ್ (58) ಮೂರನೇ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಿಂದ ಇವರು ಈ ಹಿಂದೆ 2004ರಲ್ಲಿ ಚುನಾಯಿತರಾಗಿದ್ದರು.

ಹರಿಯಾಣ ಜನಹಿತ ಕಾಂಗ್ರೆಸ್ (ಎಚ್‌ಜೆಸಿ) ಮತ್ತು ಬಿಜೆಪಿಯೊಂದಿಗೆ ಮೈತ್ರಿಕೂಟದ ಅಭ್ಯರ್ಥಿ ಬಿಷ್ಣೋಯಿ 3,55,941 ಮತಗಳನ್ನು ಪಡೆದರೆ, ಚೌತಾಲ ಅವರು 3,49,618 ಮತಗಳನ್ನು ಹಾಗೂ ಜೈ ಪ್ರಕಾಶ್ 1,49,785 ಮತಗಳನ್ನು ಗಳಿಸಿದ್ದಾರೆ. ಒಟ್ಟು 13.32 ಲಕ್ಷ ಮತದಾರರು ಮತ್ತು 40 ಅಭ್ಯರ್ಥಿಗಳು ಕಣದಲ್ಲಿದ್ದ ಈ ಕ್ಷೇತ್ರದಲ್ಲಿ ಅಕ್ಷರಶಃ ತ್ರಿಕೋನ ಸ್ಪರ್ಧೆ ಇತ್ತು.

ಅಣ್ಣಾ ತಂಡದ ಕಾಂಗ್ರೆಸ್ ವಿರೋಧಿ ಪ್ರಚಾರವು ತಮ್ಮ ಗೆಲುವಿನಲ್ಲಿ ಯಾವುದೇ ಪ್ರಭಾವ ಬೀರಿಲ್ಲ ಎಂದು ಬಿಷ್ಣೋಯಿ ಹೇಳಿದ್ದರೆ, ಹಿಸ್ಸಾರ್ ಕ್ಷೇತ್ರವು ರಾಜ್ಯದಲ್ಲಿನ ಕೆಲ ಗುಂಪುಗಳ ಭದ್ರ ಕೋಟೆ ಆಗಿದೆ. ಇದು ಉತ್ತಮ ಹೋರಾಟವನ್ನು ನೀಡಿತ್ತು ಎಂದು ಕಾಂಗ್ರೆಸ್ ತಿಳಿಸಿದೆ.

ಹಿಸ್ಸಾರ್‌ನವರೇ ಆದ ಅಣ್ಣಾ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಅವರು, `ಇದು ಜನಲೋಕಪಾಲ್ ಮಸೂದೆ ಕುರಿತ ಜನಮತ ಸಂಗ್ರಹ~. ಕಾಂಗ್ರೆಸ್ ಪಾಠ ಕಲಿತು ಈಗ ಜನಲೋಕಪಾಲ್ ಮಸೂದೆ ಅಂಗೀಕರಿಸಬೇಕು. ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಬಿಷ್ಣೋಯಿ ಗೆಲುವಿನಿಂದ ಅಣ್ಣಾ ತಂಡಕ್ಕೆ ಏನೂ ಆಗಬೇಕಿಲ್ಲ ಎಂದಿದ್ದಾರೆ.

ಬಿಷ್ಣೋಯಿ ತಂದೆ ಭಜನ್‌ಲಾಲ್ 2009ರಲ್ಲಿ ಹಿಸ್ಸಾರ್ ಲೋಕಸಭಾ ಕ್ಷೇತ್ರದಲ್ಲಿ 6,983 ಮತಗಳ ಅಂತರದಿಂದ ತಮ್ಮ ಸಮೀಪಸ್ಪರ್ಧಿ ಐಎನ್‌ಎಲ್‌ಡಿಯ ಸಂಪತ್ ಸಿಂಗ್ ಅವರನ್ನು ಸೋಲಿಸಿದ್ದರು. ಸಂಪತ್ ನಂತರದಲ್ಲಿ ಕಾಂಗ್ರೆಸ್ ಸೇರಿದ್ದರು. ಜೈಪ್ರಕಾಶ್ ಅವರು ಆಗ ಮೂರನೇ ಸ್ಥಾನದಲ್ಲಿದ್ದರು.

ಮುಂದುವರಿಯುವ ಮೈತ್ರಿ- ಸುಷ್ಮಾ: ಬಿಜೆಪಿ- ಎಚ್‌ಜೆಸಿ ಮೈತ್ರಿಕೂಟವನ್ನು ಬೆಂಬಲಿಸಿದ್ದಕ್ಕಾಗಿ ಹರಿಯಾಣದ ವಿಶೇಷವಾಗಿ ಹಿಸ್ಸಾರ್ ಕ್ಷೇತ್ರದ ಮತದಾರರಿಗೆ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. `ಬಿಜೆಪಿ- ಎಚ್‌ಜೆಸಿ~ ಮೈತ್ರಿ ಮುಂದೆಯೂ ಮುಂದುವರಿಯುವುದು ಎಂದಿದ್ದಾರೆ.

ಬಿಷ್ಣೋಯಿ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿ, `ಜನರು ಮೈತ್ರಿಕೂಟಕ್ಕೆ ಮತ ಹಾಕಿದ್ದಾರೆ. ಈ ಮೈತ್ರಿ ದೀರ್ಘ ಕಾಲದವರೆಗೆ ಮುಂದುವರಿಯಲಿದೆ. ಭವಿಷ್ಯದಲ್ಲಿ ರಾಜ್ಯದಲ್ಲಿ ಎಚ್‌ಜೆಸಿ- ಬಿಜೆಪಿ ಸರ್ಕಾರ ರಚನೆಗೆ ಈ ಗೆಲುವು ಅಡಿಗಲ್ಲು~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT