ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದೆ ನೋಡಿ ಪುಸ್ತಕದ ಮೋಡಿ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಾಸಲು ಬಣ್ಣದ ಅಂಗಿ ಪ್ಯಾಂಟು, ಕೈಯಲ್ಲಿ ಬಿಳಿ ಚೀಲ, ಚೀಲದೊಳಗೆ ಪುಸ್ತಕ ರಾಶಿ. ರಾಮಾಯಣ, ಮಹಾಭಾರತ, ಭಗವದ್ಗೀತ, ವ್ಯಾಸಭಾರತ, ಪಂಚತಂತ್ರ, ಚಂದಮಾಮ, ಗ್ರಾಮೀಣರಿಗೆ ಅಗತ್ಯವಾದ ಗ್ರಾಮ ತಾಲ್ಲೂಕು ನಕ್ಷೆ, ಅರ್ಜಿಗಳು, ಕೃಷಿ ಮಾಹಿತಿ ... ಅಬ್ಬಬ್ಬಾ ಒಂದೇ, ಎರಡೇ! ಇದನ್ನು ಹೊತ್ತು ಸೈಕಲ್ ಏರಿದರೆ ಸುಮಾರು ನಲವತ್ತು ಕಿ.ಮೀ ತನಕ ಸವಾರಿ. ಎಲ್ಲೆಡೆ ಆದರದ ಸ್ವಾಗತ. ಮಕ್ಕಳಷ್ಟೇ ಅಲ್ಲ, ವೃದ್ಧರಿಗೂ ಇವರೆಂದರೆ ಬಹಳ ಇಷ್ಟ.

ಇವರೇ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ರಾಮಚಂದ್ರಭಟ್ಟ ಬೆಳಸೂರ (ಚಿಕ್ಕದಾಗಿ ಆರ್.ಜಿ.ಭಟ್ಟ), ಜನರ ಬಾಯಲ್ಲಿ ಭಟ್ರು. ಇವರಿಂದ ಯಾರು ಯಾವ ಪುಸ್ತಕ ಪಡೆದಿದ್ದಾರೆ ಎಂಬುವುದಕ್ಕೆ ಭಟ್ಟರ ಹತ್ತಿರ ಲಿಖಿತ ದಾಖಲೆ ಇಡುವುದಿಲ್ಲ. ಆದರೆ ಯಾರು ಯಾವ ಪುಸ್ತಕ ಪಡೆದಿದ್ದಾರೆ ಎಂಬುದು ಭಟ್ಟರ ಮಸ್ತಕದಲ್ಲಿ ಮಾತ್ರ ದಾಖಲಾಗಿದೆ.

ಇಲ್ಲೊಬ್ಬರಿದ್ದಾರೆ. ಅವಿಭಜಿತ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹಿರೇಕಟ್ಟೇನಹಳ್ಳಿ ಗ್ರಾಮದ ಕನ್ನಡ ಭಾಷಾ ಪತ್ರಿಕೆಯ ಪ್ರೇಮಿ. ಹೆಸರು ಕಲ್ಯಾಣ್ ಕುಮಾರ್. ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ.

ತೆಲುಗು ಪ್ರಾಬಲ್ಯದ ಈ ಸೀಮೆಯಲ್ಲಿ ಕನ್ನಡ ಭಾಷಾ ಪತ್ರಿಕೆಗಳ ಹುಟ್ಟು, ಬೆಳವಣಿಗೆ ಮತ್ತು ಅವಸಾನದ ಬಗ್ಗೆ ನಿಖರ ಮಾಹಿತಿ ಹೊಂದಿರುವ ವ್ಯಕ್ತಿ. ಶಾಲಾ ದಿನಗಳಲ್ಲಿ ಪತ್ರಿಕೆಗಳಲ್ಲಿನ ಕುತೂಹಲಕಾರಿ ವಿಷಯಗಳನ್ನು ಓದುವ ಆಸಕ್ತಿಯಿಂದ ಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡವರು. ಓದು ಮುಂದುವರಿಯುತ್ತಿದ್ದಂತೆ ಇದನ್ನೇ ದೊಡ್ಡ ಹವ್ಯಾಸವನ್ನಾಗಿ ಮಾಡಿಕೊಳ್ಳುವ ಗುಂಗಿನಲ್ಲಿಯೇ ಬೆಳೆದರು. ಆರಂಭದಲ್ಲಿ ಪ್ರಕಟವಾಗುತ್ತಿದ್ದ ಕನ್ನಡದ ಹಳೆ ಪತ್ರಿಕೆಗಳನ್ನು ಸಂಗ್ರಹಿಸಲು ಪುಸ್ತಕದ ಅಂಗಡಿ, ಗ್ರಂಥಾಲಯಗಳಿಗೆ ಅಲೆದಾಡಿದರು. ಎಷ್ಟೋ ಪತ್ರಿಕಾ ಬರಹಗಾರರನ್ನು ಭೇಟಿಯಾದರು. ತಮ್ಮ ಪ್ರಯತ್ನ ಕೈಗೂಡದಿದ್ದಾಗ ಮತ್ತೆ ಮತ್ತೆ ಪ್ರಯತ್ನ ಮುಂದುವರಿಸಿ ಹಟವಾದಿ ಎನಿಸಿಕೊಂಡರು.

ಹೀಗೆ ಒಂದು ದಿನ ಅವರ ಮನೆಯ ಅಟ್ಟದ ಮೇಲೆ ಬೇಕಾದ ವಸ್ತುವೊಂದನ್ನು ಹುಡುಕಾಡುತ್ತಿದ್ದ ಸಂದರ್ಭದಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ಟ್ರಂಕ್‌ವೊಂದು ಪತ್ತೆಯಾಯಿತು. ತಾತ ನಂಜುಂಡಯ್ಯನವರು ಅಕ್ಕರೆಯಿಂದ ಜೋಪಾನವಾಗಿ ಇಟ್ಟುಕೊಂಡಿದ್ದ ಟ್ರಂಕ್ ಅದಾಗಿತ್ತು. ಅಕ್ಷರ ಬಲ್ಲವರಾಗಿದ್ದ ಅವರು ಕನ್ನಡ, ತೆಲುಗು, ಮರಾಠಿ ಭಾಷೆ ತಿಳಿದ ಪ್ರಾವೀಣ್ಯರು. ವಿವಿಧ ವಿಷಯ ಸಂಬಂಧಿ ಹಳೆ ಗ್ರಂಥಗಳು, ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿ ಮುದ್ರಣ ಕಾಣದ ಪತ್ರಿಗಳು ಅದರಲ್ಲಿ ಇದ್ದವು. ಮಣಭಾರದ ಟ್ರಂಕ್‌ನಲ್ಲಿ ಇಷ್ಟೊಂದು ಗ್ರಂಥಗಳು ಇದ್ದರೂ ಮನೆಯ ಯಾರ ಗಮನಕ್ಕೂ ಬಾರದೆ ಟ್ರಂಕ್ ನಿರ್ಲಪ್ತವಾಗಿ ಅಟ್ಟದ ಮೂಲೆ ಸೇರಿತ್ತು. ತಂದೆ ಅವರಿಗಷ್ಟೇ ಟ್ರಂಕ್‌ನಲ್ಲಿದ್ದ ಗ್ರಂಥ ಸಂಪನ್ಮೂಲದ ಬಗ್ಗೆ ಮಾಹಿತಿ ಇತ್ತು. ತಾತನವರು ಕಾಲವಾದ ನಂತರ ತಂದೆ ಅವರೂ ಮರೆತುಬಿಟ್ಟಿದ್ದರು.

ಟ್ರಂಕ್ ತೆರೆದಾಗ ಭಟ್ಟರಿಗೆ ಅಚ್ಚರಿಯಾಯಿತು. ಕೆಲ ಪತ್ರಿಕೆಗಳನ್ನು ತಾತನವರು ಗ್ರಂಥಗಳಿಗೆ ಬೈಂಡಿಂಗ್ ಮಾಡಿಕೊಂಡಿದ್ದರು. ದೂಳಿಗೆ ಆಹುತಿಯಾದ ಬೈಂಡಿಂಗ್ ಮುಟ್ಟಿದರೆ ಪುಡಿಪುಡಿಯಾಗಿ ಬಿಡುತ್ತಿತ್ತು. ಆ ಪುಸ್ತಕಕ್ಕೆ ಹೊದಿಕೆಯಾಗಿದ್ದ ಪತ್ರಿಕೆಗಳು 20 ಶತಮಾನದ ಆರಂಭದಲ್ಲಿ ಪ್ರಕಟವಾಗುತ್ತಿದ್ದ ಕನ್ನಡದ ಪ್ರಮುಖ ಪತ್ರಿಕೆಗಳು ! `ನನಗೆ ಬೇಕಾಗಿದ್ದು ಸಿಕ್ಕಿದ ಖುಷಿಯಲ್ಲಿ ಅಂದಿನಿಂದ ಮಕ್ಕಳಂತೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದೇನೆ' ಎನ್ನುತ್ತಾರೆ.

ಹೀಗಿದೆ ಭಟ್ಟರ ಹವ್ಯಾಸ
ಯಲ್ಲಾಪುರದಿಂದ ಏಳು ಕಿ.ಮೀ ಇರುವ ಬೆಳಸೂರು ಭಟ್ಟರ ಸೇವಾಕೇಂದ್ರ ತಮ್ಮ ಮನೆಯ ಪಕ್ಕದಲ್ಲಿ `ಶ್ರಿ ದುರ್ಗಾಂಬಿಕ ಗ್ರಂಥಾಲಯ ಬೆಂಬಲಿಗರ ಬಳಗ' ಎನ್ನುವ ಪುಸ್ತಕ ಕೇಂದ್ರವನ್ನು ತೆರೆದಿದ್ದಾರೆ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು ಈ ಬಳಗದ ಉದ್ದೇಶ. ಈ ನಿಟ್ಟಿನಲ್ಲಿ ಭಟ್ಟರು ಮನೆ ಮನೆ ತಿರುಗಿ ಹಲವರ ಸಹಕಾರ ಕೋರಿ ಟ್ರಂಕ್‌ಗಳಲ್ಲಿಯೋ ಪೆಟಾರಿಯಲ್ಲಿಯೋ ದೂಳು ಹಿಡಿದಿದ್ದ ಪುಸ್ತಕಗಳನ್ನು ಕಾಡಿ ಬೇಡಿ ಸಂಗ್ರಹಿಸಿದ್ದಾರೆ. ತಾವೇ ಪುಸ್ತಕಗಳನ್ನು ಇಡಲು ಕಪಾಟನ್ನು ಮಾಡಿ ವ್ಯವಸ್ಥಿತವಾಗಿ ಪುಸ್ತಕಗಳನ್ನು ಇಟ್ಟಿದ್ದಾರೆ. ಇಲ್ಲಿಗೆ ಬಂದರೂ ವ್ಯವಸ್ಥಿತವಾಗಿ ಕುಳಿತು ಓದಬಹುದು.

ಭಟ್ಟರ ಚಟುವಟಿಕೆಗಳು ಇಷ್ಟಕ್ಕೆ ಮುಗಿಯುವುದಿಲ್ಲ. ಮಹಿಳೆಯರಿಗೆ ಹೊಲಿಗೆ ತರಬೇತಿ, ಜೇನುಸಾಕಣಿಕೆ ತರಬೇತಿ, ಕಲಾವಿದರಿಗೆ ಭಾಗವತಿಕೆ, ಮದ್ದಳೆ, ಚಂಡೆ, ಅಭಿನಯ, ಮಾತುಗಾರಿಕೆ ತರಬೇತಿ ಮತ್ತು ಇವರು ಯಕ್ಷಗಾನ ಕಲಾವಿದರಾದ ಕಾರಣ ಸಾಮಾಜಿಕ ಕಳಕಳಿ ಬಿಂಬಿಸುವ ಕಾರ್ಯಕ್ರಮಗಳನ್ನು ಯಕ್ಷಗಾನದ ಮೂಲಕ ಜನ್ಮತಾಳಿವೆ. ಇವರು ರಚಿಸಿದ ತಾಳಮದ್ದಳೆ ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ.

ಭಟ್ಟರ ಗ್ರಂಥಾಲಯದ ಚಟುವಟಿಕೆಗಳು ಒಂದೆರಡಲ್ಲ ನಿರುದ್ಯೋಗಿ ಯುವಕರಿಗಾಗಿ ಜೇನುಸಾಕಣೆ ತರಬೇತಿ, ಏಕಾದಶಿ ಸಮಯದಲ್ಲಿ ಆಧ್ಯಾತ್ಮಿಕ ಶಿಬಿರ ಈ ಕಾರಣಗಳಿಂದಾಗಿ ಗ್ರಂಥಾಲಯಕ್ಕೆ ಬಂದವರ ದೃಷ್ಟಿ ಪುಸ್ತಕಗಳತ್ತಲೂ ಹೊರಳಲಿ ಎನ್ನುವುದು ಭಟ್ಟರ ಆಸೆ.

ತಮ್ಮ ಸಮಾಜಮುಖಿ ಚಟುವಟಿಕೆಗಳಿಗಾಗಿ ಅನೇಕ ಪ್ರಶಸ್ತಿಗಳು ಇವರಿಗೆ ಬಂದಿವೆ. ಕೆಲವರು ಇವರ ಕಾರ್ಯವನ್ನು ಮೆಚ್ಚಿ ಪುಸ್ತಕಗಳನ್ನು ದೇಣಿಗೆ ಕೊಟ್ಟಿದ್ದಾರೆ. ಮನಸ್ಸಿದ್ದರೆ ಜಾಗತೀಕರಣ ಯುಗದಲ್ಲೂ ಪುಸ್ತಕ ಕೇಂದ್ರಿತ ಮಾಹಿತಿ ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸಬಹುದು ಎನ್ನುವುದಕ್ಕೆ ರಾಮಚಂದ್ರ ಭಟ್ಟರೇ ಸಾಕ್ಷಿ. ನಮಗೆ ಬೇಕಿರುವುದು ಇಂಥವರೇ ಅಲ್ಲವೇ?

ಕಲ್ಯಾಣ ಕುಮಾರ್ ಪ್ರೇಮ

1887ರಲ್ಲಿ ಮೈಸೂರು ನಗರದಲ್ಲಿ ಹುಟ್ಟಿದ `ವೃತ್ತಾಂತ ಪತ್ರಿಕೆ' ವಾರ ಪತ್ರಿಕೆ. 1907ರಲ್ಲಿ ಬಿ. ಪುಟ್ಟಯ್ಯನವರಿಂದ ಸ್ಥಾಪಿತವಾದ `ಒಕ್ಕಲಿಗರ ಪತ್ರಿಕೆ' ಮತ್ತು ಎಂ. ವೆಂಕಟಕೃಷ್ಣಯ್ಯನವರು `ನಡೆಗನ್ನಡಿ', `ಸಾಧ್ವಿ', `ಸಂಪದಭ್ಯುದಯ' ಪತ್ರಿಕೆಗಳು ಕಲ್ಯಾಣ ಕುಮಾರ್ ಅವರ ಬಳಿ ಇವೆ. 1947ರಲ್ಲಿ ಆರಂಭವಾದ ವೀರ ಕೇಸರಿ ವಾರಪತ್ರಿಕೆ, 1923ರಲ್ಲಿ ಹೊರಡುತ್ತಿದ್ದ `ದಿ ಟ್ರೂಥ್' ಪತ್ರಿಕೆ, ಶತಮಾನ ಪೂರೈಸಿರುವ `ಜೀವನ ಶಿಕ್ಷಣ' 1950ರಲ್ಲಿ ಮೈಸೂರು ಸಂಸ್ಥಾನದಿಂದ ಪ್ರಕಟವಾಗುತ್ತಿದ್ದ `ಶಿಕ್ಷಣ ಬಂಧು' ಹಾಗೆಯೇ `ತಾಯಿನಾಡು' ಮತ್ತು `ಜನವಾಣಿ', 1950ರಲ್ಲಿ ಹೊಸಕೆರೆ ಚಿದಂಬರಯ್ಯನವರು ಪ್ರಕಟಿಸುತ್ತಿದ್ದ `ಭಕ್ತ ಬಂಧು' ಪತ್ರಿಕೆ ಮತ್ತು ಪ್ರಾಚೀನ ಖಗೋಳ ವಿಜ್ಞಾನಿ `ಕಣದ' ಅವರ ಹೆಸರಿನಲ್ಲಿ ನ್ಯಾಷನಲ್ ಏರೋನಾಟಿಕ್ ಲಿಮಿಟೆಡ್‌ನಿಂದ ಕನ್ನಡದಲ್ಲಿ ಪ್ರಕಟವಾಗುವ ವೈಜ್ಞಾನಿಕ ಸಂಶೋಧನೆ ಪತ್ರಿಕೆಯ ಸಂಗ್ರಹವೂ ಇದೆ. ದಿನಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆಗಳ ಸುಮಾರು 3 ಸಾವಿರ ಸಂಗ್ರಹವಿದೆ. 100ಕ್ಕೂ ಹೆಚ್ಚು ವಿವಿಧ ವಾರಪತ್ರಿಕೆ, ಮಾಸ ಪತ್ರಿಕೆಗಳ ಚಂದಾದಾರರಾಗಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೂ ಸ್ವಂತ ಖರ್ಚಿನಲ್ಲಿ  ಹೋಗಿ ಪತ್ರಿಕೆಗಳ ಪ್ರದರ್ಶನ ಏರ್ಪಡಿಸಿ ಕನ್ನಡ ಪತ್ರಿಕೆಗಳ ಇತಿಹಾಸ ಸಾರುವ ಕೆಲಸ ಮಾಡುತ್ತಿದ್ದಾರೆ. ಸಂಬಳದ ಬಹುಪಾಲನ್ನು ಇದಕ್ಕಾಗಿಯೇ ವಿನಿಯೋಗಿಸುತ್ತಿದ್ದಾರೆ.

ಕುಮಾರರ ನೋವು
`ಮೈಸೂರಿನಲ್ಲಿ ಒಮ್ಮೆ ಸಣ್ಣ ಪತ್ರಿಕೆಗಳ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಷಣಕಾರರು ಪತ್ರಿಕೆಗಳ ಬಗ್ಗೆ ಸುದೀರ್ಘ ಭಾಷಣ ಮಾಡಿದರೂ ಮಳಿಗೆಯಲ್ಲಿ ಪ್ರದರ್ಶಿಸಿದ ಪತ್ರಿಕೆಗಳ ಬಗ್ಗೆ ಕಣ್ಣೆತ್ತಿಯೂ ನೋಡಿಲ್ಲ. ಅಲ್ಲದೆ, ಮಳಿಗೆ ಹಾಕಲು ಆಯೋಜಕರ ಕೈ ಕಾಲು ಹಿಡಿಯಬೇಕಾಯಿತು. ಇಂಥ ಸಾಕಷ್ಟು ವಿಷಯಗಳಿಂದ ನೋವು ಅನುಭವಿಸಿದ್ದೇನೆ. ದೂರದ ಊರುಗಳಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಹೋಗುವ ಸಂದರ್ಭದಲ್ಲಿ ಸಾಕಷ್ಟು ಪಡಿಪಾಟಲು ಪಡುತ್ತಿದ್ದೇನೆ. ಪತ್ರಿಕೆಗಳನ್ನು ಮಳೆ, ಗಾಳಿಯಿಂದ ಸುರಕ್ಷಿತವಾಗಿ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲ. ಒಮ್ಮೆ ಹಾಲಿನ ವಾಹನದಲ್ಲಿ ಪತ್ರಿಕೆಗಳನ್ನು ಹೊತ್ತುಕೊಂಡು ಕಾರ್ಯಕ್ರಮಕ್ಕೆ ಹೋದ ನಿದರ್ಶನವೂ ಇದೆ' ಎನ್ನುತ್ತಾರೆ.

ಶಾಲಾ ಶಿಕ್ಷಕನಾಗಿರುವ ನಾನು ಕಾರ್ಯಕ್ರಮಗಳಿಗೆ ಹೋಗುವ ಸಲುವಾಗಿ ರಜೆ ಮತ್ತು ಹಣ ನಷ್ಟವಾಗುತ್ತಿದೆ. ಆದರೂ ಕೆಲಸ ನಿಲ್ಲಿಸಿಲ್ಲ. ಹಲವು ಗಣ್ಯರು ನನ್ನನ್ನು ಅಭಿನಂದಿಸಿದ್ದಾರೆ. ಕೆಲವರು ನನ್ನ ಈ ಪ್ರೀತಿಗೆ ಅಪಹಾಸ್ಯವನ್ನೂ ಮಾಡಿದ್ದಾರೆ. ಆದರೂ, ನನ್ನ ಪ್ರಯತ್ನ ಬಿಟ್ಟಿಲ್ಲ. ನನ್ನ ಎಲ್ಲ ಕಷ್ಟ - ಸುಖಗಳಿಗೆ ಪತ್ನಿ ಮತ್ತು ಕುಟುಂಬ ಸದಸ್ಯರ ನಿರಂತರ ಪ್ರೋತ್ಸಾಹ ಸಿಗುತ್ತಿರುವುದರಿಂದಲೇ ನನ್ನ ಹವ್ಯಾಸ ಮತ್ತಷ್ಟು ವಿಸ್ತಾರಗೊಳ್ಳಲು ಸಾಧ್ಯವಾಗಿದೆ. ಇಂಥ ಹವ್ಯಾಸ ರೂಢಿಸಿಕೊಂಡ ನನ್ನ ಬಗ್ಗೆಯೇ ನನಗೆ ಹೆಮ್ಮೆ ಇದೆ' ಎನ್ನುತ್ತಾರೆ  ಕಲ್ಯಾಣ್ ಕುಮಾರ್.   
-ಟಿ. ಶಿವಕುಮಾರ್‌ಸುಬ್ರಹ್ಮಣ್ಯ, ಹುಬ್ಬಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT