ರಾಯಚೂರು: ಜನ, ಸಮಾಜದ ರಕ್ಷಣೆಗೆ ಸದಾ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಪೊಲೀಸರ ಕಾರ್ಯ ಪ್ರಶಂಸನೀಯ. ದೇಶ, ಸಮಾಜದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಕರ್ತವ್ಯನಿಷ್ಠೆ ಅನುಕರಣೀಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್. ಎಚ್ ಮಿಟ್ಟಲಕೋಡ್ ಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ ಆಯೋಜಿಸಿದ್ಧ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹುತಾತ್ಮ ಪೊಲೀಸರ ಕರ್ತವ್ಯನಿಷ್ಠೆಯು ಪೊಲೀಸ್ ಸಮುದಾಯಕ್ಕೆ ಸದಾ ಸ್ಫೂರ್ತಿಯ ಸೆಲೆ. ಅಸಮರ್ಥತೆಯನ್ನು ಹೋಗಲಾಡಿಸಿಕೊಂಡು ಕಾರ್ಯದಕ್ಷತೆಯಿಂದ ಮುನ್ನಡೆಯಬೇಕು. ಕಾನೂನು ಕರೆಂಟ್ ಇದ್ದ ಹಾಗೆ. ಅದನ್ನು ಮುಟ್ಟಿದರೆ `ಶಾಕ್~ ಹೊಡೆಯುತ್ತದೆ ಎಂಬುದನ್ನು ಜನತೆಗೆ ಪೊಲೀಸರು ಸೂಕ್ತ ರೀತಿಯಲ್ಲಿ ತಿಳಿಸಿಕೊಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ ಬಿಸ್ನಳ್ಳಿ ಪೊಲೀಸ್ ಹುತಾತ್ಮ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಕಳೆದೊಂದು ವರ್ಷದಲ್ಲಿ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಓದಿದರು. ಈ ಪೈಕಿ ಕರ್ನಾಟಕದ ಐವರು ಪೊಲೀಸರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೆಂಕಟೇಶ ಎಂಬುವವರು ಸೇರಿದ್ದಾರೆ ಎಂದು ನುಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಬಿ. ಮಹಾಂತೇಶ ವೇದಿಕೆಯಲ್ಲಿದ್ದರು.