ಬೀದರ್: ಕರ್ತವ್ಯ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸ್ ಸಿಬ್ಬಂದಿ ಸೇವೆ, ತ್ಯಾಗವನ್ನು ಪೊಲೀಸ್ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಭಾನುವಾರ ಸ್ಮರಿಸಲಾಯಿತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೃತಪಟ್ಟ ಪೊಲೀಸರಿಗೆ ಗೌರವ ಸಲ್ಲಿಸುವ ದ್ಯೋತಕವಾಗಿ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಮತ್ತು ಇತರ ಪ್ರಮುಖರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಿ.ಸಿ.ಜಾಫರ್ ಅವರು, ವಿವಿಧ ರಾಜ್ಯಗಳಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಮೃತ ಪಟ್ಟಿದ್ದಾರೆ. ಇದು ಆತಂಕದ ಮತ್ತು ದುಃಖದ ವಿಷಯ ಎಂದರು.
ಕರ್ತವ್ಯದಲ್ಲಿ ನಿರತರಾದ ಸಿಬ್ಬಂದಿ ರಕ್ಷಣೆಗೂ ಒತ್ತು ನೀಡುವ ಮೂಲಕ ಈ ಸಂಖ್ಯೆಯನ್ನು ಕಡಿಮೆ ಮಾಡುವ ಚಿಂತನೆಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಅಕ್ಟೋಬರ್ 21, 1959ರಂದು ಚೀನಾದ ಗಡಿ ಭಾಗ ಲಡಾಖ್ನಲ್ಲಿ ನಡೆದ ಹೋರಾಟದಲ್ಲಿ 10 ಮಂದಿ ಭಾರತೀಯ ಸೈನಿಕರು ಮೃತಪಟ್ಟ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಮೃತರಾದ ಸಿಬ್ಬಂದಿ ಹೆಸರುಗಳನ್ನುಒಳಗೊಂಡಂತೆ ಹುತಾತ್ಮ ದಿನದ ವರದಿ ಒಪ್ಪಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರ್ತೂರಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾಂಜಲಿ, ವಿವಿಧ ಪಕ್ಷಗಳ ಮುಖಂಡರು, ಪ್ರಮುಖರು ಇದ್ದರು.