ಗದಗ: ಉತ್ತರಾಖಂಡ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ವೇಳೆ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ನರಗುಂದ ತಾಲ್ಲೂಕಿನ ಜಗಾಪುರದ ಯೋಧ ಬಸವರಾಜ ಯರಗಟ್ಟಿ ಅವರ ಶವವು ಬುಧವಾರ ಜಗಾಪುರ ತಲುಪಲಿದೆ. `ಪಾರ್ಥಿವ ಶರೀರವನ್ನು ಬುಧವಾರ ಮುಂಬೈನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ತರಲಾಗುವುದು. ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ರಸ್ತೆ ಮೂಲಕ ಜಗಾಪುರ ಗ್ರಾಮಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನ, ಮೆರವಣಿಗೆ ಹಾಗೂ ಸಂಜೆ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ಜಿಲ್ಲಾಡಳಿತ `ಪ್ರಜಾವಾಣಿ'ಗೆ ತಿಳಿಸಿದೆ.
ಪ್ರತಿಭಟನೆ: ಯೋಧ ಬಸವರಾಜ ಯರಗಟ್ಟಿ ಶವ ಒಂದು ವಾರವಾದರೂ ಗ್ರಾಮಕ್ಕೆ ಬಾರದೇ ಇರುವುದನ್ನು ಖಂಡಿಸಿ ಯೋಧನ ಮನೆ ಎದುರು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.