ಹಿರಿಯೂರು: ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಗ್ರಾಮೀಣ ಅಂಚೆ ಸೇವಕರ ಹುದ್ದೆಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮತ್ತು ನ್ಯಾಯಮೂರ್ತಿ ತಲವಾರ್ ಸಮಿತಿ ನೀಡಿರುವ ವರದಿಯ ಅನುಸಾರ ಕಾಯಂಗೊಳಿಸಬೇಕು ಎಂದು ನೌಕರರ ಸಂಘದ ಹಿರಿಯೂರು ವಿಭಾಗದ ಅಧ್ಯಕ್ಷ ಕೆ. ರಂಗಸ್ವಾಮಿ ಒತ್ತಾಯಿಸಿದರು.
ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಬುಧವಾರ ಅಖಿಲ ಭಾರತ ಅಂಚೆ ಇಲಾಖೆ ನೌಕರರ ಸಂಘದ ಸ್ಥಳೀಯ ಶಾಖೆ ಆಶ್ರಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಇಲಾಖೆಯ ನೌಕರರಿಗೆ ಕೊಡುವಂತೆ ತಮಗೂ ಬೋನಸ್ ನೀಡಬೇಕು. ಅಂಚೆಪೇದೆ ಮೇಲೆ ಗಾರ್ಡ್ ಮತ್ತು ಎಂಟಿಎಸ್ ಕೆಲಸಕ್ಕೆ ಗ್ರಾಮೀಣ ಅಂಚೆ ನೌಕರರನ್ನು ಸೇವಾ ಜೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಬೇಕು. ಹೊಸ ನೇಮಕಾತಿಯಲ್ಲಿರುವ ನ್ಯೂನತೆ ಸರಿಪಡಿಸಬೇಕು.
ಇಲಾಖೆಯಲ್ಲಿ ಖಾಲಿ ಇರುವ ಗ್ರಾಮೀಣ ಅಂಚೆ ನೌಕರರ ಹುದ್ದೆ ರದ್ದುಗೊಳಿಸಬಾರದು. ಪ್ರಸ್ತುತ ಇರುವ 20 ಸಾವಿರಕ್ಕೆ ಒಂದು ಪಾಯಿಂಟ್ ಎಂಬ ನಿಯಮವನ್ನು ಸಡಿಲಿಸಬೇಕು. ವೇತನ ಕಡಿತ ಸ್ಥಗಿತಗೊಳಿಸಬೇಕು.
ಕಡಿತಗೊಳಿಸಿರುವ ವೇತನವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ ತಕ್ಷಣದಿಂದ ಜಾರಿಗೆ ತರಲು ಸಚಿವ ಸಂಪುಟದ ಮಂಜೂರಾತಿ ದೊರಕಿಸಿಕೊಳ್ಳಬೇಕು. ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ 2006 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಿ ಎಲ್ಲಾ ಸೌಲಭ್ಯ ನೀಡಬೇಕು ಎಂದು ರಂಗಸ್ವಾಮಿ ಆಗ್ರಹಿಸಿದರು.
ಮುಜೀಬ್, ಹಬೀಬ್ಖಾನ್, ವಿ. ತಿಪ್ಪೇಸ್ವಾಮಿ, ಎನ್. ಅಜಯಕುಮಾರ್, ಇ. ಲಕ್ಷ್ಮಣ, ನಾಗರಾಜ, ಶ್ರೀನಿವಾಸಮೂರ್ತಿ, ನಾಗಭೂಷಣ್, ವೀರಭದ್ರನಾಯಕ, ವಿ.ಎಸ್. ರಾಜಕುಮಾರ್, ಎಸ್. ಶಂಕರ್, ರಾಜಮ್ಮ, ಸಜೀನಾಬೇಗಂ, ಟಿ. ಶೇಖರ್, ಆಂಜನೇಯ, ಆರ್ಮುಗಂ ಪಾಲ್ಗೊಂಡಿದ್ದರು.