ಹುನಗುಂದ: ತಾಲ್ಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕೂಡಲಸಂಗಮ ಕ್ಷೇತ್ರದ ಭೀಮಪ್ಪ ಸಂಗಪ್ಪ ಭಜಂತ್ರಿ ಮತ್ತು ಉಪಾಧ್ಯಕ್ಷೆಯಾಗಿ ಐಹೊಳೆ ಕ್ಷೇತ್ರದ ಬಸವ್ವ ಬಾಲಪ್ಪ ಕಬ್ಬರಗಿ ಅವಿರೋಧವಾಗಿ ಸೋಮವಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಬಾಗಲಕೋಟೆ ಉಪ ವಿಭಾಗಾಧಿಕಾರಿ ಡಾ.ಶಂಕರ ವಣಕ್ಯಾಳ ತಿಳಿಸಿದ್ದಾರೆ.
ಈ ಸ್ಥಾನಗಳು ಹಿಂದಿನವರ ರಾಜೀನಾಮೆಯಿಂದ ತೆರವಾಗಿದ್ದವು. ಹೊಸ ಮೀಸಲಾತಿ ಅನ್ವಯ ಚುನಾವಣೆ ನಡೆಯಿತು. ತಾಪಂ ಇಒ ಆರ್.ವಿ. ತೋಟದ ಮತ್ತು ತಹಶೀಲ್ದಾರ್ ವೀರೇಶ ಬಿರಾದಾರ ಉಪಸ್ಥಿತರಿದ್ದರು.
ಚುನಾವಣೆಗೆ ಮೊದಲು ಬ್ಲಾಕ್ ಅಧ್ಯಕ್ಷ ಸಿದ್ದಪ್ಪ ಹೊಸೂರ ನೇತೃತ್ವದಲ್ಲಿ ಸಭೆ ನಡೆದು ಅಭ್ಯರ್ಥಿಗಳನ್ನು ನಿರ್ಧರಿಸಲಾಯಿತು ಎನ್ನಲಾಗಿದೆ. ಈ ಸಭೆಯಲ್ಲಿ ಇಲಕಲ್ಲ ನಗರಸಭೆ ಅಧ್ಯಕ್ಷ ದೇವಾನಂದ ಕಾಶಪ್ಪನವರ, ಜಿಪಂ ಸದಸ್ಯ ಮಹಾಂತೇಶ ನರಗುಂದ, ಮಹಾಂತಪ್ಪ ಪಲ್ಲೇದ, ಗಂಗಣ್ಣ ಬಾಗೇವಾಡಿ, ಗಂಗಾಧರ ದೊಡಮನಿ, ಶಂಕ್ರಪ್ಪ ನೇಗಲಿ, ಚಿದಾನಂದ ಧೂಪದ, ಶೀವಾನಂದ ಕಂಠಿ, ನೀಲಪ್ಪ ತಪೇಲಿ, ಮುತ್ತಣ್ಣ ಕಲಗೋಡಿ ಹಾಜರಿದ್ದರು.