ಇಂಡಿ: ಭಯೋತ್ಪಾದಕರ ಬೆದರಿಕೆಯ ಹಿನ್ನೆಲೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳು, ಸಮುದ್ರ ತೀರದಲ್ಲಿ ಕಟ್ಟೆಚ್ಚರ ವಹಿಸಲು ಆದೇಶಿಸಲಾಗಿದೆ. ಜತೆಗೆ ಸೈಬರ್ ಅಪರಾಧ ತಡೆಗೆ ಪರಿಣಿತ ಎಂಜಿನಿಯರುಗಳ ಸೇವೆಯನ್ನೂ ಪಡೆಯಲಾಗುತ್ತಿದೆ ಎಂದು ಗೃಹ ಮತ್ತು ಸಾರಿಗೆ ಖಾತೆ ಸಚಿವ ಆರ್.ಅಶೋಕ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಿಸಿ ದುಷ್ಕೃತ್ಯವೆಸಗುವ ಭಯೋತ್ಪಾದಕರ ಕೃತ್ಯದ ಬಗ್ಗೆ ವಾರದ ಹಿಂದೆಯೇ ಮಾಹಿತಿ ಬಂದಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಪ್ರಯಾಣಿಸಿರುವ ಹಾಗೂ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರ ಮಾಹಿತಿಯನ್ನು ಪರಿಶೀಲಿಸಲು ಆದೇಶ ನೀಡಲಾಗಿದೆ ಎಂದು ಇಂಡಿಯಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದರು.
ಮಂಗಳೂರು, ಕಾರವಾರ ಸೇರಿದಂತೆ 300 ಕಿ.ಮೀ ಉದ್ದದ ಸಮುದ್ರ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.