ಹುಬ್ಬಳ್ಳಿ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮ ದಿನೋತ್ಸವದ (ಈದ್ ಮಿಲಾದುನ್ನಬಿ) ಅಂಗವಾಗಿ ಬುಧವಾರ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.ಗಣೇಶಪೇಟೆ ಹಾಗೂ ಹಳೇ ಹುಬ್ಬಳ್ಳಿಯಿಂದ ಹೊರಟ ಮೆರವಣಿಗೆಗಳು ನಗರದ ತುಂಬಾ ಸಂಚರಿಸಿದವು.
ಗಣೇಶಪೇಟೆಯಿಂದ ಹೊರಟ ಮೆರವಣಿಗೆಯ ನೇತೃತ್ವವನ್ನು ಅಬ್ದುಲ್ ಹಮೀದ್ ಖೈರಾತಿ ವಹಿಸಿದ್ದರು.ಸೈಯದ್ ಬಾಷಾ ಪೀರಾ ಖಾದ್ರಿ, ಸವಣೂರು ಕಲ್ಮಠದ ಮಹಾಂತ ಸ್ವಾಮೀಜಿ, ಸಿಖ್ ಧರ್ಮಗುರು ಸುರೇಂದ್ರಸಿಂಗ್ಜಿ, ಫಾದರ್ ಜೇವಿಯರ್ ಸೆಬಾಸ್ಟಿಯನ್, ಶಾಸಕ ವೀರಭದ್ರಪ್ಪ ಹಾಲಹರವಿ, ಪೊಲೀಸ್ ಆಯುಕ್ತ ಕೆ.ರಾಮಚಂದ್ರ ರಾವ್, ಡಿಸಿಪಿ ಎನ್.ಆರ್.ಚಾಂದಿರಾಮ್ ಸಿಂಗ್, ಮಿಲ್ಲತೆ ಮುಸ್ತಫಾ ಮಿಲಾದ್ ಸಮಿತಿ ಅಧ್ಯಕ್ಷ ಎ.ಸಿ. ಅರಸಿಕೇರಿ ಮೊದಲಾದ ಗಣ್ಯರು ಮೆರವಣಿಗೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮರಕಜಿ ದಾರುಲ್ ಉಲೂಮ್ ವತಿಯಿಂದ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಿಂದ ಹೊರಟ ಭವ್ಯ ಮೆರವಣಿಗೆ ಬಂಕಾಪುರ ಚೌಕ, ಕಾಳಮ್ಮನ ಅಗಸಿ, ದುರ್ಗದ ಬೈಲ್ ಮೂಲಕ ಅಸಾರ ಓಣಿ ದರ್ಗಾ ತಲುಪಿತು.ಮಾಜಿ ಸಚಿವ ಎ.ಎಂ.ಹಿಡಂಸಗೇರಿ ಭಾಗವಹಿಸಿದ್ದರು. ಅಸಾರ್ ಮೊಹಲ್ಲಾದಲ್ಲಿ ‘ಮೊಯಿ ಮುಬಾರಕ್’ ಏರ್ಪಡಿಸಲಾಗಿತ್ತು.