ನವದೆಹಲಿ (ಪಿಟಿಐ): ಹುಲಿ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಎರಡೂ ಒಟ್ಟೊಟ್ಟಿಗೆ ಸಾಗಬೇಕು ಎಂಬ ಉದ್ದೇಶದಿಂದ ಹುಲಿ ಅಭಯಾರಣ್ಯ ನಿರ್ವಹಣೆಗೆ ಸಂಬಂಧಿಸಿದ ಹೊಸ ಮಾರ್ಗದರ್ಶಿ ಸೂತ್ರವನ್ನು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ.
ಇದುವರಗೆ ಜಾರಿಯಲ್ಲಿ ಇದ್ದ ಮಾರ್ಗದರ್ಶಿ ಸೂತ್ರದ ಪ್ರಕಾರ ಹುಲಿ ಅಭಯಾರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನಗಲಲ್ಲಿ ಪ್ರವಾಸಿಗರು ತೀರಾ ಒಳಗಡೆ ಸಫಾರಿ ಹೋಗುವಂತಿರಲಿಲ್ಲ. ಇದರಿಂದ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಕುಂಠಿತಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಹೋಸ ಸೂತ್ರದಲ್ಲಿ ಪ್ರಾಸಿಗರು ಅಭಯಾರಣ್ಯದ ಒಳಗೆ ಹೋಗಲು ಅವಕಾಶವಿದ್ದರೂ, ನಿರ್ದಿಷ್ಟ ಸಂಖ್ಯೆ ಪ್ರವಾಸಿಗರನ್ನು ಮಾತ್ರ ಒಳಕ್ಕೆ ಕರೆದುಕೊಂಡು ಹೊಗಬೇಕು ಎಂಬ ಷರತ್ತನ್ನು ಹಾಕಲಾಗಿದೆ.
ಇದಲ್ಲದೆ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಹೊಸದಾಗಿ ಯಾವುದೆ ರೀತಿಯ ಕಟ್ಟಡ ಅಥವಾ ಮೂಲ ಸೌಕರ್ಯ ನಿರ್ಮಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಜುಲೈ 24ರಂದು ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಷೇಧಿಸಿ ಹೊರಡಿಸಿದ್ದ ತನ್ನ ಆದೇಶವನ್ನು ಕಳೆದ ವಾರ ಮಾರ್ಪಾಡು ಮಾಡಿದ ಸುಪ್ರೀಂಕೋರ್ಟ್, ಒಂದು ವಾರದಲ್ಲಿ ಹೊಸ ಮಾರ್ಗದರ್ಶಿ ಸೂತ್ರ ರೂಪಿಸಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಹೊಸ ಮಾರ್ಗದರ್ಶಿ ಸೂತ್ರವು ರಾಜ್ಯ ಸರ್ಕಾರಗಳಿಗೆ ಒಪ್ಪಿಗೆಯಾಗದಿದ್ದಲ್ಲಿ ಅವು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ ಎಂದು ನ್ಯಾಯಮೂರ್ತಿ ಎ. ಕೆ. ಪಟ್ನಾಯಿಕ್ ಮತ್ತು ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಮೀಸಲು ಅರಣ್ಯ ಪ್ರದೇಶಗಳಲ್ಲೂ ಸ್ಥಳೀಯರ ನೆರವಿನೊಂದಿಗೆ ವನ್ಯಜೀವಿಗಳ ಸಂಸರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೊಸ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.