ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸಫಾರಿಗೆ ಯೋಗೇಶ್ವರ್ ಕೊಕ್ಕೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಇಲಾಖೆ -ಸಚಿವರ ನಡುವಿನ ತಿಕ್ಕಾಟಕ್ಕೆ ಪ್ರವಾಸೋದ್ಯಮ ಬಲಿ

ಬೆಂಗಳೂರು:  ಸುಪ್ರೀಂಕೋರ್ಟ್‌ನ ಅನುಮತಿಯ ಮೇಲೆ ದೇಶದ ಎಲ್ಲಾ ಹುಲಿ ಅಭಯಾರಣ್ಯಗಳಲ್ಲಿ ಸಫಾರಿ ಆರಂಭವಾಗಿದ್ದರೆ, ರಾಜ್ಯದ ಅರಣ್ಯ ಸಚಿವರ ಸೂಚನೆಯಿಂದಾಗಿ  ಶುಕ್ರವಾರದಿಂದಲೇ ರಾಜ್ಯದಲ್ಲಿ ಸಫಾರಿ ನಿಂತಿದೆ.

ಸಚಿವರ ಮೌಖಿಕ ಆದೇಶದ ಮೇಲೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ಹುಲಿ ಅಭಯಾರಣ್ಯಗಳಲ್ಲಿ ಸಫಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದೇಶದಿಂದ ರಾಜ್ಯದ ಹುಲಿ ಅಭಯಾರಣ್ಯಗಳಾದ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಭದ್ರಾ ಹಾಗೂ ಅಣಶಿ-ದಾಂಡೇಲಿಯಲ್ಲಿ ಬೆಳಿಗ್ಗೆಯಿಂದಲೇ ಸಫಾರಿ ನಡೆದಿಲ್ಲ.

ವನ್ಯಜೀವಿ ಸಂರಕ್ಷಣಾ ಹೋರಾಟಗಾರ ಅಜಯ್ ದುಬೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜುಲೈ 24ರಂದು ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ  ನಿಲ್ಲಿಸುವಂತೆ ಮಧ್ಯಂತರ ತಡೆಯಾಜ್ಞೆ ನೀಡಿ, ಕಾಡಿನ ಹೃದಯಭಾಗ ಮತ್ತು ಹೊರ ವಲಯ ಗುರುತಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತನಗೆ ಸಲ್ಲಿಸಿದ್ದ ಮಾರ್ಗಸೂಚಿಗಳನ್ನು ಪರಿಗಣಿಸಿ ಇದೇ 16ರಂದು ಸುಪ್ರೀಂಕೋರ್ಟ್, ಕಾಡಿನ ಹೃದಯ ಭಾಗದ ಶೇ 20ರಷ್ಟು ಪ್ರದೇಶ  ಮೀರದಂತೆ ಪ್ರವಾಸೋದ್ಯಮ ನಡೆಸಬಹುದು ಎನ್ನುವ ಸೂಚನೆ ನೀಡಿತು.

ಹುಲಿ ಸಫಾರಿಗೆ ಕೊಕ್ಕೆ
ಈ ಹಣವನ್ನು ಇಲಾಖೆಯು ಕಾಡುಗಳ್ಳರ ತಡೆ ಶಿಬಿರ ಅಭಿವೃದ್ಧಿಗೆ, ದಿನಗೂಲಿ ಸಿಬ್ಬಂದಿಯ ಕಲ್ಯಾಣಕ್ಕೆ ಬಳಸುತ್ತಿತ್ತು. ಇದೀಗ ಸಚಿವರು ತೆಗೆದುಕೊಂಡ ನಿರ್ಧಾರದಿಂದ ಅರಣ್ಯ ಇಲಾಖೆಗೇ ಹಾಗೂ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ ಎಂದು ಹೆಸರೇಳಲು ಬಯಸದ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

`ಸಫಾರಿಗೆ ಹೋಗುವ ಉದ್ದೇಶದಿಂದಲೇ ಜೆಎಲ್‌ಆರ್‌ಗೆ ಪ್ರವಾಸಿಗರು ಆಗಮಿಸುತ್ತಿದ್ದರು. ಗುರುವಾರದಿಂದ ಸಫಾರಿ ಆರಂಭವಾಗಿತ್ತು. ಆದರೆ ಸಫಾರಿ ನಿಲ್ಲಿಸಿದ್ದರಿಂದ ಪ್ರವಾಸಿಗರಿಗೆ ಹಣವನ್ನು ಮರುಪಾವತಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ~ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ತಿಳಿಸಿದರು.

ಈ ಬಗ್ಗೆ ಇಲಾಖೆಯ ಪಿಸಿಸಿಎಫ್ (ವನ್ಯಜೀವಿ) ದೀಪಕ್ ಶರ್ಮ ಅವರನ್ನು ಸಂಪರ್ಕಿಸಿದಾಗ, `ಇದು ಆಡಳಿತಕ್ಕೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಏನೂ ಹೇಳಲಾರೆ. ಆದರೆ ಸಫಾರಿ ನಿಲ್ಲಿಸಿರುವ ವಿಚಾರದಲ್ಲಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದೇನೆ. ಈ ಬಗ್ಗೆ ಚರ್ಚೆ ನಡೆಯಬೇಕಿದೆ~ ಎಂದು ಉತ್ತರಿಸಿದರು.

ಹುಲಿ ಅಭಯಾರಣ್ಯದ ಸುತ್ತ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ರೆಸಾರ್ಟ್‌ಗಳಿವೆ. ಇದೀಗ ಶಾಲಾ ಕಾಲೇಜುಗಳಿಗೆ ದಸರಾ ರಜೆ ಬಂದಿರುವುದಿಂದ ರೆಸಾರ್ಟ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಏರಿಕೆಯಾಗಿದೆ. ಅಲ್ಲಿಗೆ ತೆರಳುವ ಪ್ರವಾಸಿಗರು ಸಫಾರಿ ಬಯಸುವುದು ಸಹಜ. ಇದನ್ನು ಬಳಸಿಕೊಂಡು ರೆಸಾರ್ಟ್‌ಗಳ ಮೇಲೆ ಒತ್ತಡ ತಂತ್ರ ಹಾಕುತ್ತಿರಬಹುದು ಎನ್ನುವ ಅನುಮಾನ ಪ್ರವಾಸೋದ್ಯಮ ವಲಯದಿಂದ ವ್ಯಕ್ತವಾಗಿದೆ.

ಚರ್ಚೆಯ ನಂತರವೇ ಸಫಾರಿ
`ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ನಡೆಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿಯಮಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಸಭೆಯನ್ನು ಶನಿವಾರ ಕರೆದಿದ್ದೇನೆ. ನ್ಯಾಯಾಲಯದ ಸೂಚನೆ ಪಾಲನೆಯಾಗುತ್ತಿರುವ ವಿಚಾರದಲ್ಲಿ ನನಗೆ ತೃಪ್ತಿಯಾದರೆ ಮತ್ತೆ ಸಫಾರಿ ಆರಂಭಿಸಲು ಸೂಚಿಸುತ್ತೇನೆ~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ `ಪ್ರಜಾವಾಣಿ~ಗೆ ತಿಳಿಸಿದರು.

`ಸಫಾರಿ ಆರಂಭಿಸುವ ವಿಚಾರ ನನ್ನ ಗಮನಕ್ಕೆ ಬರಬೇಕಿತ್ತು. ಈ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ಯಾವ ಕಾರಣಕ್ಕೆ ನ್ಯಾಯಾಲಯಗಳು ಆಡಳಿತದಲ್ಲಿ ಸೂಚನೆಗಳನ್ನು ನೀಡುತ್ತವೆ. ನೀತಿ ನಿಯಮ ಪಾಲಿಸಿದರೆ ನ್ಯಾಯಾಲಯಗಳು ಆಡಳಿತದ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ.
 
ನಾನು ಜನಪ್ರತಿನಿಧಿ. ಜನರಿಗೆ ಉತ್ತರ ನೀಡಬೇಕಾದವನು ನಾನು. ನನ್ನ ಗಮನಕ್ಕೆ ಬಾರದಂತೆ ಇಲಾಖೆಯ ಆಡಳಿತ ನಡೆಯಬಾರದು ಮತ್ತು ನ್ಯಾಯಾಲಯದ ಸೂಚನೆ ಪೂರ್ಣವಾಗಿ ಪಾಲಿಸಬೇಕು. ಸಫಾರಿ ನಿಲ್ಲಿಸಿರುವ ವಿಚಾರದಲ್ಲಿ ನನಗೇನು ಪೂರ್ವಗ್ರಹವಿಲ್ಲ~ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT