`ಸಿದ್ದರಾಮಯ್ಯ ಅನುಭವಿ, ಒಳ್ಳೆಯ ಬಜೆಟ್ ಮಂಡಿಸುತ್ತಾರೆಂದು ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂತಹ ಎಲ್ಲ ನಿರೀಕ್ಷೆಗಳನ್ನು ಅವರು ಹುಸಿಗೊಳಿಸಿದ್ದಾರೆ. ಈ ಬಜೆಟ್ಗೆ ದೂರದೃಷ್ಟಿ ಇಲ್ಲ. ಸಾಲ ಸಿಗುತ್ತೆ ಅಂಥ ಸಾಲ ಮಾಡಬಾರದೆಂದು ಬುದ್ಧಿ ಹೇಳಿ ಅಂತಿಮವಾಗಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಅಗ್ಗದ ಮದ್ಯ ನೀಡುವ ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ಇತರ ಮದ್ಯಗಳದರವನ್ನು ವಿಪರೀತ ಹೆಚ್ಚಿಸಿದ್ದಾರೆ. ಒಟ್ಟಾರೆ ಈ ಬಜೆಟ್ನಲ್ಲಿ ಸಮನ್ವಯ ಸಮಿತಿಯ `ಗುಮ್ಮ' ಅಡಗಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಇದು ಜನಪರವಾಗಿಲ್ಲ'.
- ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ
`ಮುಂದುವರಿದ ಭಾಗ....'
`ಈ ಬಜೆಟ್ ನಾನು ಫೆಬ್ರುವರಿ 8ರಂದು ಮಂಡಿಸಿದ ಬಜೆಟ್ನ ಮುಂದುವರಿದ ಭಾಗ. ಆದರೆ, ನಾವು ಘೋಷಣೆ ಮಾಡಿದ್ದ ಹೊಸ ತಾಲ್ಲೂಕುಗಳ ರಚನೆಯನ್ನು ಕೈಬಿಟ್ಟಿರುವುದು ಬೇಸರದ ಸಂಗತಿ. ನೀರಾವರಿ ಮತ್ತು ಕೃಷಿಗೆ ಆದ್ಯತೆ ಕೊಟ್ಟಿಲ್ಲ. ಪ್ರತ್ಯೇಕವಾದ ಕೃಷಿ ಬಜೆಟ್ ಮಂಡಿಸದೆ ಕೃಷಿ ಕ್ಷೇತ್ರ ನಿರ್ಲಕ್ಷಿಸಲಾಗಿದೆ'.
- ಜಗದೀಶ ಶೆಟ್ಟರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ
`ಸೈಕಲ್, ಭಾಗ್ಯಲಕ್ಷ್ಮಿ ಇಲ್ಲ'
`ಈ ಬಜೆಟ್ನಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಿಲ್ಲ. ದೂರದೃಷ್ಟಿ ಇಲ್ಲ. ಸಕ್ಕರೆ ಮೇಲಿನ ಪ್ರವೇಶ ಶುಲ್ಕವನ್ನು ತೆಗೆದು, ವ್ಯಾಟ್ ವಿಧಿಸಿರುವುದರಲ್ಲಿ ಅಂತಹ ವ್ಯತ್ಯಾಸ ಏನೂ ಕಾಣುವುದಿಲ್ಲ. ಸೈಕಲ್, ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ ಯೋಜನೆಗಳ ಪ್ರಸ್ತಾಪ ಇಲ್ಲ'.
- ಬಿ.ಎಸ್.ಯಡಿಯೂರಪ್ಪ, ಕೆಜೆಪಿ ಶಾಸಕಾಂಗ ಪಕ್ಷದ ನಾಯಕ
`ಸಮಗ್ರ ದೃಷ್ಟಿಕೋನದ ಕೊರತೆ'
ಯಾವುದೇ ಹೊಸತನ ಇಲ್ಲದ ಬಿಜೆಪಿ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್. ಅಂಕಿ-ಸಂಖ್ಯೆಗಳು ಇಲ್ಲದ ಮಾಹಿತಿಗಳ ಮೇಲೆ ಕಣ್ಣಾಡಿಸಿದಾಗ ರಾಜ್ಯಪಾಲರ ಭಾಷಣ ಓದಿದಂತೆ ಭಾಸವಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಸಮಗ್ರವಾದ ದೃಷ್ಟಿಕೋನ ಬಜೆಟ್ನಲ್ಲಿ ಕಾಣುವುದಿಲ್ಲ. ಹಣದುಬ್ಬರಕ್ಕೂ ಯಾವುದೇ ಪರಿಹಾರ ಇಲ್ಲ. ಬೆಂಗಳೂರಿನ ಸಮಸ್ಯೆಗಳಿಗೆ ಉತ್ತರ ಇಲ್ಲ.
- ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.