ಹೀರೊ ಮೋಟೊ ಕಾರ್ಪ್ ಕಂಪೆನಿಯು ವರ್ಷಕ್ಕೆ 18 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಬೃಹತ್ ಘಟಕವನ್ನು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸ್ಥಾಪಿಸುವ ಸಂಬಂಧ ಆ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕದ ಧಾರವಾಡ ಬಳಿ ಸ್ಥಾಪನೆಯಾಗಬಹುದಾಗಿದ್ದ ಈ ಕಾರ್ಖಾನೆ ಆಂಧ್ರ ಪಾಲಾಗಲು ರಾಜ್ಯ ಸರ್ಕಾರದ ಮಂದಗತಿ ಧೋರಣೆಯೂ ಒಂದು ಕಾರಣ ಆಗಿರಬಹುದು.
₨ 1,600 ಕೋಟಿ ಬಂಡವಾಳ ಹೂಡಿಕೆಯ ಈ ಕಾರ್ಖಾನೆಯನ್ನು ರಾಜ್ಯದಲ್ಲಿ ಸ್ಥಾಪಿಸುವ ಸಂಬಂಧ ಒಂದು ವರ್ಷದ ಹಿಂದೆಯೇ ಕಂಪೆನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಇಂತಹ ದೊಡ್ಡ ಕಂಪೆನಿಯು ಒಲವು ತೋರಿದ ತಕ್ಷಣ ಅದಕ್ಕೆ ಬೇಕಾದ ಭೂಮಿ, ಇತರೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮತ್ತಷ್ಟು ಆಸ್ಥೆ ವಹಿಸಬೇಕಿತ್ತು. ಆ ಕಂಪೆನಿ ಕೇಳಿದ್ದ ಕೆಲವು ರಿಯಾಯಿತಿಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ವಿಳಂಬ ನೀತಿ ಅನುಸರಿಸಿದ್ದು ಸರಿಯಲ್ಲ. ಕಾರ್ಖಾನೆಗೆ ಒಟ್ಟು 500 ಎಕರೆ ಭೂಮಿ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಆದೇಶದ ಪ್ರತಿ ಕೈಗಾರಿಕಾ ಇಲಾಖೆಯ ಅಧೀನದಲ್ಲಿಯೇ ಇರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸಿಕ್ಕಿಲ್ಲ ಎಂದರೆ ಅದು ಕಂಪೆನಿಗೆ ಯಾವಾಗ ಸಿಗುತ್ತಿತ್ತೊ? ಇದು ಆಡಳಿತಾರೂಢರ ಇಚ್ಛಾಶಕ್ತಿ ಕೊರತೆಗೆ ಕನ್ನಡಿ. ರಾಜ್ಯದಲ್ಲಿ ಕೈಗಾರಿಕಾ ಖಾತೆಗೆ ಪ್ರತ್ಯೇಕ ಸಚಿವರೇ ಇಲ್ಲ. ಹತ್ತಾರು ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಭಾಯಿಸಲು ಸಾಧ್ಯವೇ?
ಕಳೆದ ವಾರವಷ್ಟೇ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಿದೆ. ಅದರ ಬೆನ್ನಿಗೇ ಹೀರೊ ಮೋಟೊ ಕಾರ್ಪ್ ಕಂಪೆನಿ ರಾಜ್ಯದಿಂದ ಹೊರಹೋಗಿದೆ. ಒಂದು ಪ್ರಮುಖ ಕಂಪೆನಿ ನೆಲೆ ನಿಂತರೆ ಸಾವಿರಾರು ಮಂದಿಗೆ ಉದ್ಯೋಗ ಅವಕಾಶ ದೊರೆಯುತ್ತದೆ. ಕನಿಷ್ಠ ಆ ದೃಷ್ಟಿಯಿಂದಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
ಬರೀ ಬೆಂಗಳೂರು ಅಥವಾ ಅದರ ಸುತ್ತ ಮುತ್ತಲಿನ ಪ್ರದೇಶವೇ ಬೇಕು ಎಂದು ಉದ್ಯಮಿಗಳೂ ಬಯಸಬಾರದು. ಈ ಕಂಪೆನಿ ಈಗ ಚಿತ್ತೂರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ, ಬೆಂಗಳೂರಿನ ಜತೆಗಿರುವ ಸಂಪರ್ಕ ಸೌಲಭ್ಯದ ಲೆಕ್ಕಾಚಾರ ಕಾರಣ ಇದ್ದಿರಬಹುದು. ಚಿತ್ತೂರಿನಿಂದ ಬೆಂಗಳೂರು ಕೇವಲ 178 ಕಿ.ಮೀ. ಅಂತರದಲ್ಲಿದೆ.
ಒಂದು ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಸುತ್ತಲೇ ಮತ್ತೊಂದು ರಾಜ್ಯಕ್ಕೆ ಜಿಗಿಯುವ ಕಂಪೆನಿಗಳ ಪ್ರವೃತ್ತಿ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಈ ಅನುಭವಗಳಿಂದ ಸರ್ಕಾರ ಪಾಠ ಕಲಿಯಬೇಕು. ಹೂಡಿಕೆಸ್ನೇಹಿ ವಾತಾವರಣ ಸೃಷ್ಟಿಸಬೇಕು. ಉದ್ಯಮಗಳ ಸ್ಥಾಪನೆಗೆ ಆಸಕ್ತಿ ತೋರುವವರ ಮನವಿಗೆ ತಕ್ಷಣ ಸ್ಪಂದಿಸಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಕೈಗಾರಿಕೆಗಳು ಬೆಳೆಯುವಂತೆ ನೋಡಿಕೊಳ್ಳಬೇಕು. ಜಿಲ್ಲೆಗೊಂದು ಬೃಹತ್ ಉದ್ಯಮ ಸ್ಥಾಪನೆ ಸರ್ಕಾರದ ಗುರಿ, ಆದ್ಯತೆ ಆಗಬೇಕು. ಅಂಥ ಕೈಗಾರಿಕಾ ನೀತಿ ರೂಪಿಸಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಪ್ರದರ್ಶಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.