ಹನುಮಸಾಗರ: ಸಮೀಪದ ಹೂಲಗೇರಿಯ ಗ್ರಾಮದಿಂದ ಸಾಗುವ ನಾಗೂರ ರಸ್ತೆ ಬಹು ದಿನಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಕೂಡಲೆ ರಸ್ತೆ ದುರಸ್ತಿ ಕಾಮಗಾರಿ ಕೈಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆಯಲ್ಲಿ ಕಲ್ಲುಗಳು ಮೇಲೆದ್ದಿವೆ, ವಾಹನ ಸವಾರರೂ ಬವಣೆ ಪಡುವಂತಾಗಿದ್ದು, ರಾತ್ರಿ ಸಮಯದಲ್ಲಿ ಅಪಘಾತಗಳು ಸಂಭವಿಸಿವೆ, ಈ ಕುರಿತಾಗಿ ಹಲವಾರು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಇಲಾಖೆ ರಸ್ತೆದುರಸ್ತಿಗೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಸುಮಾರು 8ಕಿ.ಮೀ. ವರೆಗಿನ ಈ ರಸ್ತೆ ಪುರ್ತಗೇರಿ, ನಾಗೂರ, ಅಂಟರಠಾಣಾ, ಯರಿಗೋನಾಳ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು ಈ ಎಲ್ಲ ಗ್ರಾಮಸ್ಥರು ಇದೆ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಈಗಾಗಲೇ ಬಂಡರಗಲ್ನಿಂದ ಹೂಲಗೇರಿವರೆಗಿನ ರಸ್ತೆ ಕಾಮಾಗಾರಿಯಾದಂತೆ ಈ ರಸ್ತೆಯ ದುರಸ್ತಿ ಕಾಮಗಾರಿ ಕೂಡಲೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.