ಟ್ಯೂಲಿಪ್ ಗಿಡ ವಸಂತ ಮಾಸದಲ್ಲಿ ಹೂ ಬಿಡುತ್ತದೆ. ಇದಕ್ಕೆ ಎಲ್ಲರ ಮನಸೆಳೆಯುವ ಚೆಲುವು, ಕಂಪಿದೆ. ಟ್ಯೂಲಿಪ್ ಹೆಸರಿನಡಿ ಪ್ರದರ್ಶನಗೊಂಡಿರುವ ಬಂಗಾಳದ ಖ್ಯಾತ ಕಲಾವಿದರಾದ ಶೈಲೇನ್ ಘೋಷ್, ಕಾಶೀನಾಥ್, ಜಯಂತ್ ಮತ್ತು ಮಂಜು ಬೇರಾ, ಸಬೀರ್ ಹುಸೇನ್ ಅವರ ಕಲಾಕೃತಿಗಳು ಸಹ ಹೂವಿನಷ್ಟೇ ಚೆಲುವನ್ನು ಹೊಂದಿವೆ.
ಸೃಷ್ಟಿಯಲ್ಲಾದ ಅನೇಕ ಬದಲಾವಣೆಯ ಫಲವಾಗಿ ನಾಗರಿಕತೆ ರೂಪುಗೊಂಡಿತು. ಕಾಲಾನಂತರದಲ್ಲಿ ಮಾನವನ ಸ್ವಾರ್ಥಕ್ಕೆ ಸಿಕ್ಕ ನಿಸರ್ಗ ತನ್ನ ಸಹಜತೆ ಕಳೆದುಕೊಳ್ಳತೊಡಗಿತು.
ಮಾಲಿನ್ಯದ ಪ್ರಮಾಣ ಸಹ ಹೆಚ್ಚಿತು. ಇದು ಹೀಗೆ ಮುಂದುವರಿದದ್ದೇ ಆದರೆ ನಾವು ಮುಂದೆ ಭಾರೀ ದಂಡ ತೆರಬೇಕಾಗುತ್ತದೆ. ಮುಂದೊಂದು ದಿನ ಇಡೀ ಭೂಮಿಯೇ ಮಸಣವಾಗಿ ಮಾರ್ಪಟ್ಟರೂ ಆಶ್ಚರ್ಯವಿಲ್ಲ. ಈ ಕಲಾಕೃತಿಗಳು ಎಚ್ಚರಿಸುವುದು ಅದನ್ನೇ.
ಖ್ಯಾತ ಕಲಾವಿದ ಜಯಂತ ಬೇರಾ ಅವರು ನಿಸರ್ಗಪ್ರಿಯ. ಅವರ ಈ ಪರಿಸರ ಪ್ರೇಮ ರಕ್ತದಲ್ಲಿಯೇ ಹರಿಯುತ್ತಿದೆ. ಅವರ ಈ ಮನಸ್ಥಿತಿಯ ಮೂಸೆಯೊಳಗೆ ರೂಪುಗೊಂಡಿದ್ದೇ ಹಸಿರು ಕಾಳಜಿಯುಳ್ಳ ಕಲಾಕೃತಿಗಳು. ಇವರ ಎಲ್ಲ ಕಲಾಕೃತಿಗಳು ಪ್ರಕೃತಿ, ಜಾಗತಿಕ ತಾಪಮಾನ ಮೊದಲಾದ ವಿಷಯಗಳಿಗೆ ಸಂಬಂಧಿಸಿದವು.
ಮಂಜು ಬೇರಾ ಅವರ ಕೃಷ್ಣ ರಾಧೆಯರ ಕಲಾಕೃತಿಯಲ್ಲಿ ಕೃಷ್ಣ ಭಾವಪರವಶನಾಗಿ ಕೊಳಲನ್ನು ನುಡಿಸುವ ಪರಿ ಅನನ್ಯವಾಗಿ ಮೂಡಿಬಂದಿದೆ. ವೇಣುವಿನ ಕೊಳಲ ನಿನಾದಕ್ಕೆ ರಾಧೆ ಸಂಪೂರ್ಣ ಮನಸೋತಿರುವುದು ಆಕೆಯ ಕಂಗಳಲ್ಲಿ ನಿಚ್ಚಳವಾಗಿ ಬಿಂಬಿತಗೊಂಡಿದೆ.
ಸಬೀರ್ ಹುಸೇನ್ ಅವರು ಪ್ರಾಯಕ್ಕೆ ಕಾಲಿಟ್ಟ ಹೆಣ್ಣಿನ ಮನೋ ತುಮುಲಗಳನ್ನು ಕಟ್ಟಿಕೊಟ್ಟಿದ್ದಾರೆ. ಯೌವನಕ್ಕೆ ಕಾಲಿಟ್ಟ ಸುಂದರ ತರುಣಿಯೊಬ್ಬಳು ಸ್ನಾನ ಮಾಡುವಾಗ ಭಾವಪರವಶಳಾಗಿರುವ ಪರಿ ಶೃಂಗಾರ ಭಾವ ಬಿಂಬಿಸುತ್ತದೆ.
ಕಾಶೀನಾಥ್ ಅವರ ಕಲಾಕೃತಿಯಲ್ಲಿ ಸೃಷ್ಟಿಯ ವಿಚಿತ್ರಗಳು ನವಿರಾಗಿ ಮೂಡಿವೆ. ಶೈಲೇನ್ ಘೋಷ್ ಅವರು ಹೆಣ್ಣು ಮತ್ತು ಪ್ರಕೃತಿಯನ್ನು ಸಂಕೇತವಾಗಿ ಕಲಾಕೃತಿ ರಚಿಸಿರುವ ಪರಿ ಬೆರಗು ಹುಟ್ಟಿಸುವಂತಿದೆ. ಕಲಾವಿದರ ಕಲಾಕೃತಿಗಳು ಸಮಕಾಲೀನ ವಿಷಯವನ್ನು ಒಳಗೊಂಡಿರುವಂತಹು.
ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10.30 ರಿಂದ 7.30. ಡಿ. 6ಕ್ಕೆ ಪ್ರದರ್ಶನ ಮುಕ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.