ಬೆಂಗಳೂರು: ದಿಢೀರ್ ಹೃದಯಾಘಾತಕ್ಕೆ ತುತ್ತಾಗುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ `ಪವರ್ ಹಾರ್ಟ್ ಆಟೊಮೇಟೆಡ್ ಎಕ್ಸ್ಟರ್ನಲ್ ಡಿಫಿಬ್ರಿಲೇಟರ್~ ಎಂಬ ಸಾಧನವನ್ನು ಒಪ್ಟೊ ಸರ್ಕಿಟ್ಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಯು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಕೊಡುಗೆಯಾಗಿ ನೀಡಿದೆ.
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಿಗಮದ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿನೋದ್ ರಮಣಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಉಷಾ ರಮಣಿ ಅವರು ನಿಗಮದ ನಿರ್ದೇಶಕ ಬಿ.ಎಸ್.ಸುಧೀರ್ ಚಂದ್ರ ಅವರಿಗೆ ಚಿಕಿತ್ಸಾ ಸಾಧನವನ್ನು ಹಸ್ತಾಂತರ ಮಾಡಿದರು.
ನಂತರ ಮಾತನಾಡಿದ ವಿನೋದ್, `ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಆರೈಕೆ ಪರಿಸರ ನಿರ್ಮಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಈ ಸಾಧನ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ~ ಎಂದರು.
`ಸಾಧನದ ಬಳಕೆ ಬಗ್ಗೆ ನಿಗಮದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಆಕಸ್ಮಿಕವಾಗಿ ಹೃದಯಾಘಾತವಾದರೆ ಈ ಸಾಧನದ ಮೂಲಕ ತತ್ಕ್ಷಣ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿದೆ~ ಎಂದು ಅವರು ಹೇಳಿದರು.
`ಇಂಗ್ಲೆಂಡ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಹೆಚ್ಚು ಜನ ದಟ್ಟಣೆ ಇರುವ ಸಮೂಹ ಸಾರಿಗೆ ವ್ಯವಸ್ಥೆಗಳಲ್ಲಿ ಈ ಸಾಧನವನ್ನು ಇರಿಸಲಾಗಿದೆ. ಅದೇ ಮಾದರಿಯಲ್ಲಿ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಈ ಸಾಧನ ಇರಿಸಲಾಗುವುದು~ ಎಂದು ಅವರು ಹೇಳಿದರು.
ಸುಧೀರ್ ಚಂದ್ರ ಮಾತನಾಡಿ, `ಸಂಸ್ಥೆ ನೀಡಿರುವ ಸಾಧನವನ್ನು ಮೆಟ್ರೊದ ಒಂದು ನಿಲ್ದಾಣದಲ್ಲಿ ಇರಿಸಿ, ತುರ್ತು ಸಂದರ್ಭಗಳಲ್ಲಿ ಬಳಸಲಾಗುವುದು~ ಎಂದರು.