ಬೆಂಗಳೂರು: ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಫೋರ್ಟಿಸ್ ಆಸ್ಪತ್ರೆಯು ‘ಹೃದಯಾಘಾತ ಮತ್ತು ಆದರಿಂದ ಪಾರಾಗುವ ಬಗೆ’ ಕುರಿತು ಕೈಪಿಡಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರಧಾನ ಹೃದ್ರೋಗ ತಜ್ಞ ಡಾ.ವಿವೇಕ ಜವಳಿ ಮಾತನಾಡಿ, ‘ದೇಶದಲ್ಲಿ ಶೇ 80ರಷ್ಟು ಮಂದಿ ಹೃದಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿದ್ದಾರೆ. ಇನ್ನೂ ಹೃದಯಾಘಾತವಾದ ಶೇ 50ರಷ್ಟು ಮಂದಿಗೆ ಸಮರ್ಪಕ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಹೃದಯಾಘಾತದ ಆರಂಭಿಕ ಲಕ್ಷಣಗಳು, ಇದಕ್ಕೆ ಸಂಬಂಧಪಟ್ಟ ಮಿಥ್ಯ, ಚಿಕಿತ್ಸಾ ವಿಧಾನಗಳ ಸಂಪೂರ್ಣ ಮಾಹಿತಿ ಈ ಕೈಪಿಡಿಯಲ್ಲಿದೆ’ ಎಂದು ಹೇಳಿದರು.
‘ಬಹುತೇಕ ಯುವಜನತೆ ಹೃದ್ರೋಗಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಚಾರ. ತಂಬಾಕು ಸೇವನೆ ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುವುದರಿಂದ ಇದರ ಸೇವನೆಯನ್ನು ನಿಷೇಧಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಹೃದ್ರೋಗ ತಜ್ಞ ಡಾ.ಎಸ್.ವೆಂಕಟೇಶ, ‘ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ಹೃದಯಾಘಾತವಾಗಿ 6 ಗಂಟೆಯ ಒಳಗೆ ಸಮರ್ಪಕ ಚಿಕಿತ್ಸೆ ನೀಡಿದರೆ ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದರು.