ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೆಚ್ಚು ತಲೆಕೆಡಿಸಿಕೊಳ್ಳಬೇಡಿ'

Last Updated 5 ಜುಲೈ 2013, 6:52 IST
ಅಕ್ಷರ ಗಾತ್ರ

ದೇವನಹಳ್ಳಿ:  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದಿದ್ದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುವಾಗ ನಾನು `ಸಣ್ಣಪುಟ್ಟ ಸಮಸ್ಯೆಗಳಿಗೆ ನನ್ನ ಬಳಿ ಬರಬೇಡಿ' ಎಂದು ಹೇಳಿರುವುದಕ್ಕೆ ಮತದಾರರು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ' ಎಂದು ಶಾಸಕ ಪಿಳ್ಳಮುನಿಶ್ಯಾಮಪ್ಪ ಸ್ಪಷ್ಟನೆ ನೀಡಿದರು.

ದೇವನಹಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಗುರುವಾರ ಮಾತನಾಡಿದ ಅವರು, `ನಾನು ಯಾರನ್ನೂ ಉದ್ದೇಶಿಸಿ ಈ ಹೇಳಿಕೆ ನೀಡಿಲ್ಲ. ಸಾಮಾಜಿಕ ಭದ್ರತೆ ಯೋಜನೆಯಡಿ ನೀಡಲಾಗುತ್ತಿರುವ ವೇತನಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅಧಿಕಾರಿಗಳೇ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಇವುಗಳನ್ನು ನನ್ನ ತನಕ ಕಳುಹಿಸಬೇಡಿ ಎಂಬರ್ಥದಲ್ಲಿ ಹೇಳಿದ್ದೇನಷ್ಟೇ' ಎಂದು ಸಮಜಾಯಿಷಿ ನೀಡಿದರು.

`ಯಾವುದೇ ಸಮಸ್ಯೆ ಇದ್ದರೂ ನಾನು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ತಾಲ್ಲೂಕಿನ ಸರ್ವಾಂಗೀಣಅಭಿವೃದ್ಧಿಯೇ ನನ್ನ ಗುರಿ. ನಾನು ವಿರೋಧ ಪಕ್ಷದಲ್ಲಿದ್ದರೂ ಆಡಳಿತ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಜನರ ಸಣ್ಣಪುಟ್ಟ ಸಮಸ್ಯೆಗಳಿಗೂ ಒತ್ತು ನೀಡುತ್ತೇನೆ. ನನ್ನನ್ನು ಗೆಲ್ಲಿಸಿರುವ ಪಕ್ಷದ ಮುಖಂಡರಿಗೆ ಹಾಗೂ  ಮತದಾರರಿಗೆ ವಿಶ್ವಾಸದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಈ ಕುರಿತು ಯಾರೇ ಆದರೂ ಎಲ್ಲಿ ಬೇಕಾದರೂ ಮುಕ್ತವಾಗಿ ಚರ್ಚಿಸಬಹುದು. ಇದರ ಬಗ್ಗೆ ಗೊಂದಲದ ಅವಶ್ಯಕತೆ ಇಲ್ಲ' ಎಂದು ಅವರು ಹೇಳಿದರು.

ಸಣ್ಣಪುಟ್ಟ ಸಮಸ್ಯೆಯ ಮತದಾರ ಎಲ್ಲಿ ಹೋಗಬೇಕು?
ದೇವನಹಳ್ಳಿ:
ತಾಲ್ಲೂಕಿನ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು `ಸಣ್ಣಪುಟ್ಟ ಕೆಲಸಕ್ಕೆ ನನ್ನ ಬಳಿ ಬರಬೇಡಿ' ಎಂದು ತಿಳಿಸಿರುವುದು ದುರದೃಷ್ಟಕರ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಾಸಕ ಪಿಳ್ಳಮುನಿಶ್ಯಾಮಪ್ಪ ಅವರು ಯಾವ ಉದ್ದೇಶಕ್ಕೆ ಈ ರೀತಿ ಹೇಳಿದ್ದಾರೆಯೋ ಗೊತ್ತಿಲ್ಲ. ಸಚಿವರ ಮನಃಸ್ಥಿತಿ ಈ ರೀತಿ ಆದರೆ ಸಣ್ಣಪುಟ್ಟ ಸಮಸ್ಯೆ ಹೊಂದಿರುವ ಮತದಾರ ತನ್ನ ದೂರನ್ನು ಯಾರ ಬಳಿ ಹೇಳಿಕೊಳ್ಳಬೇಕು' ಎಂದು ಖಾರವಾಗಿ ಪ್ರಶ್ನಿಸಿದರು.

`ರೈತರು, ಶ್ರಮಿಕರು, ಸಾಮಾಜಿಕ ಭದ್ರತಾ ವೇತನ ವಂಚಿತರು, ಪಡಿತರದಾರರು ತಮ್ಮ ಸಮಸ್ಯೆಗಳು ಬಗೆಹರಿಯದೇ ಹೋಗುವ ಕಾರಣದಿಂದಾಗಿಯೇ ಶಾಸಕರ ಬಳಿ ಬರುತ್ತಾರೆ. ಒಂದು ವೇಳೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸೂಕ್ತವಾಗಿ ಸ್ಪಂದಿಸಿ ಸಕಾಲದಲ್ಲಿ ಕೆಲಸ ಮಾಡಿಕೊಟ್ಟರೆ ಇವರೆಲ್ಲಾ ಶಾಸಕರ ಬಳಿ ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಚೇರಿಗಳಿಗೆ ಅಲೆದೂ ಅಲೆದು ಸುಸ್ತಾದ ಹತಾಶ ಜನರ ಕೊರಗುಗಳಿಗೆ ಶಾಸಕರು ಸ್ಪಂದಿಸುವುದಿಲ್ಲ ಎಂದರೆ ಹೇಗೆ' ಎಂದು ಅವರು ಕಿಡಿ ಕಾರಿದರು.

`ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ನಿವೇಶನ ವಸತಿ ಸೇರಿದಂತೆ ಹತ್ತಾರು ಜಲ್ವಂತ ಸಮಸ್ಯೆಗಳಿವೆ. ಇವುಗಳ ಬಗ್ಗೆ ಶಾಸಕರು ತಕ್ಷಣವೇ ಕಾಳಜಿ ವಹಿಸಿ ಕೆಲಸ ಮಾಡಿದರೆ ಪಕ್ಷಕ್ಕೂ ಕ್ಷೇಮ ಮತ್ತು ಅವರಿಗೂ ಕ್ಷೇಮ' ಎಂದು ಶಿವಪ್ಪ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT