ಬೆಂಗಳೂರು: `ಹೆಚ್ಚಿನ ವೇತನ ನೀಡಲು ಮುಂದಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುತ್ತಿಲ್ಲ~ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ತಿಳಿಸಿದರು.
ಇಲಾಖೆ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕುರಿತ ಮಾಧ್ಯಮ ಕಾರ್ಯಾಗಾರ~ದಲ್ಲಿ ಅವರು ಮಾತನಾಡಿದರು.`ಆರೋಗ್ಯ ಇಲಾಖೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ. ಇತ್ತೀಚೆಗೆ 800 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು.
ಅದರಲ್ಲಿ ಕರ್ತವ್ಯಕ್ಕೆ ಹಾಜರಾದವರು ಕೇವಲ ಅರ್ಧದಷ್ಟು ಮಂದಿ. ವೈದ್ಯರ ಜತೆಗೆ ತಜ್ಞರ ಕೊರತೆ ಈಗಲೂ ಕಾಡುತ್ತಿದೆ. 562 ತಜ್ಞ ವೈದ್ಯರಲ್ಲಿ ಸೇವೆಗೆ ಲಭ್ಯವಾಗಿದ್ದು ಕೇವಲ 300 ಮಂದಿ. ಅರೆ ವೈದ್ಯಕೀಯ ಸಿಬ್ಬಂದಿ ವಿಷಯದಲ್ಲಿಯೂ ಇದೇ ಸ್ಥಿತಿ ಇದೆ~ ಎಂದರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಿರ್ದೇಶಕ ಎಸ್. ಸೆಲ್ವಕುಮಾರ್, `ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಲು ಶಾಸನ ರೂಪಿಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ~ ಎಂದರು.
`ಲಿಂಗ ಪತ್ತೆಯಲ್ಲಿ ತೊಡಗಿರುವ ಡಯಾಗ್ನಸ್ಟಿಕ್ ಕೇಂದ್ರಗಳ ಮೇಲೆ ನಿಗಾ ಇಡಲು ಹೊಸ ಕ್ರಮಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೆ ಮೂರು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರನ್ನು ಒಳಗೊಂಡ ತನಿಖಾ ತಂಡ (ಡಿಎಎ) ಇಂತಹ ಕೇಂದ್ರಗಳನ್ನು ಪತ್ತೆ ಹಚ್ಚಲಿದೆ ಎಂದು ತಿಳಿಸಿದರು. ಇಲಾಖೆ ಆಯುಕ್ತ ಬಿ.ಎಸ್.ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಬಡತನ ರೇಖೆ: ಶಿಶು ಸರಕ್ಷಾ ಯೋಜನೆ
`ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಮೇಲ್ಪಟ್ಟವರಿಗೂ (ಎಪಿಎಲ್) ಹೆರಿಗೆ ಸಂದರ್ಭದಲ್ಲಿ ತಾಯಿ ಮಗುವಿನ ಆರೈಕೆ ಮಾಡುವ ಜನನಿ- ಶಿಶು ಸುರಕ್ಷಾ ಯೋಜನೆಯನ್ನು ವಿಸ್ತರಿಸಿದೆ~ ಎಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಿರ್ದೇಶಕ ಎಸ್. ಸೆಲ್ವಕುಮಾರ್ ತಿಳಿಸಿದರು.
ಇಲಾಖೆಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, `ಇಲಾಖೆಯ 17 ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯ 11 ಆಸ್ಪತ್ರೆಗಳು ಹಾಗೂ ಬಿಬಿಎಂಪಿ ಆಸ್ಪತೆಗಳು ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ನಗರದ ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ ಜನರಲ್ ಆಸ್ಪತ್ರೆ ಹಾಗೂ ಗೌಸಿಯಾ ಆಸ್ಪತ್ರೆಗಳಲ್ಲಿ ಯೋಜನೆ ಈಗಾಗಲೇಜಾರಿಯಲ್ಲಿದೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.