ಸೊರಬ: ‘ರಾಜಕಾರಣದಲ್ಲಿ ಬದ್ಧತೆ ಇರುವವರು ಮಾತಿನ ಮಂಟಪ ಕಟ್ಟುವುದಿಲ್ಲ. ಅಭಿವೃದ್ಧಿ ಕೆಲಸ ಮಾಡುತ್ತಾರೆ’ ಎಂದು ರಾಜ್ಯ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಸಿ.ಎಂ. ಉದಾಸಿ ಹೇಳಿದರು.ಮಂಗಳವಾರ ಆನವಟ್ಟಿಯಲ್ಲಿ ಪ್ರಥಮದರ್ಜೆ ಕಾಲೇಜು (ಸಮನವಳ್ಳಿ), ನಿರೀಕ್ಷಣಾ ಮಂದಿರ ಹಾಗೂ ನಬಾರ್ಡ್ ಆರ್ಐಡಿಎಫ್ 13,15 ಯೋಜನೆ ಅಡಿಯಲ್ಲಿ ಪ.ಪೂ. ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕ ಎಚ್. ಹಾಲಪ್ಪ ಶ್ರಮದಿಂದ ತಾಲ್ಲೂಕಿನ ಕಳೆದ ಎರಡೂವರೆ ವರ್ಷದಲ್ಲಿ 170 ಕಿ.ಮೀ. ರಸ್ತೆ ಕಾಮಗಾರಿ ನಡೆದಿದೆ ಎಂದು ಶ್ಲಾಘಿಸಿದರು.` 390 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ಹಾನಗಲ್ ಜೋಡಿ ರಸ್ತೆ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದೆ. ‘ವಿದ್ಯೆಯಿಂದ ವಿಕಾಸ’ ಎಂದು ಮನಗಂಡಿರುವ ಸಿಎಂ ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ` 1 ಲಕ್ಷ ಕೋಟಿ ಆಯವ್ಯಯ ಮಂಡನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅರಿತ ವಿರೋಧ ಪಕ್ಷಗಳು ಅವರ ಸಾಧನೆ ಸಹಿಸದೇ ಸರ್ಕಾರ ಉರುಳಿಸುವ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
‘ಬ್ಯಾತನಾಳ ಯೋಜನೆ ಜನರ ತಲೆಯಲ್ಲಿ ಅನಗತ್ಯವಾಗಿ ತುಂಬುವ ಒಂದು ಪ್ರಯತ್ನ ಅಷ್ಟೇ’ ಎಂದು ಅಭಯ ನೀಡಿದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ತಾಲ್ಲೂಕನ್ನು ನಂಜುಂಡಪ್ಪ ವರದಿಯಿಂದ ಹಿಂದೆ ತರಲು ಸರ್ಕಾರ ಕಾರ್ಯಶೀಲವಾಗಿದೆ. ಇಡೀ ದೇಶಕ್ಕೆ ಮಂಜೂರಾಗಿರುವ 5 ಕೇಂದ್ರೀಯ ವಿದ್ಯಾಲಯಗಳಲ್ಲಿ ಜಿಲ್ಲೆ ಒಂದನ್ನು ಸಂಪಾದಿಸಿದೆ ಎಂದು ಮಾಹಿತಿ ನೀಡಿದ ಅವರು, ದೇಶದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಶಾಸಕ ಎಚ್. ಹಾಲಪ್ಪ ಮಾತನಾಡಿ, ಚಿಕ್ಕ ಬೋರ್ಡ್ ಹಾಕಿ ದೊಡ್ಡ ವ್ಯಾಪಾರ, ದೊಡ್ಡ ಕೆಲಸ ಮಾಡುವ ಜಾಯಮಾನ ತಮ್ಮದು ಎಂದರು.ಜಿ.ಪಂ. ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ, ಸದಸ್ಯೆ ಗೀತಾ ಮಲ್ಲಿಕಾರ್ಜುನ ಮಾತನಾಡಿದರು. ಇಲಾಖೆ ಇಇ ಪ್ರಭಾಕರ ಶೆಟ್ಟಿ. ಎಇಇ ವಿಶ್ವನಾಥ್, ಗ್ರಾ.ಪಂ. ಅಧ್ಯಕ್ಷೆ ಚೆನ್ನಮ್ಮ, ಜಿ.ಪಂ. ಸದಸ್ಯರಾದ ಗುರುಕುಮಾರ್ ಪಾಟೀಲ್, ಮಲ್ಲಮ್ಮ ಮಲ್ಲಿಕಾರ್ಜುನ, ಕೋಮಲಾ ನಿರಂಜನ, ತಾ.ಪಂ. ಸದಸ್ಯರಾದ ವಿಶಾಲ, ಮೀನಾಕ್ಷಮ್ಮ, ಪಕ್ಷದ ತಾಲ್ಲೂಕು ಅಧ್ಯಕ್ಷ ಎಂ.ಆರ್. ಪಾಟೀಲ್, ಎ.ಎಲ್. ಅರವಿಂದ್, ಕಾಲೇಜು ಮುಖ್ಯಸ್ಥರು, ಉಪನ್ಯಾಸಕರು, ಗ್ರಾ.ಪಂ. ಸದಸ್ಯರು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.ಜ್ಯೋತಿ ಪ್ರಾರ್ಥಿಸಿದರು. ಕರಿಬಸಪ್ಪ ಸ್ವಾಗತಿಸಿದರು. ಸಿ.ಎಲ್. ಜಾಲಗಾರ್ ಕಾರ್ಯಕ್ರಮ ನಿರೂಪಿಸಿದರು.ಸ್ಥಳೀಯ ಗ್ರಾ.ಪಂ. ಆವರಣದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡದ ಗುದ್ದಲಿಪೂಜೆ ಹಾಗೂ ಬಾಲಿಕಾ ಪ್ರೌಢಶಾಲೆ ಹೆಚ್ಚುವರಿ ಕಟ್ಟಡದ ಉದ್ಘಾಟನೆ ಇದೇ ಸಂದರ್ಭದಲ್ಲಿ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.