ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಲ್ಲಿ ಏನೋ `ಗೋಲ್ಮಾಲ್' ಆಗಿರಬೇಕು ಎಂದು ತರ್ಕಿಸಿದ ಅವರು, ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ ದೃಢಪಡಿಸಿಕೊಳ್ಳಲು ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಹೀಗೆ ಪತ್ತೆಹಚ್ಚುವುದಕ್ಕೆ ಅವರು ಹೆಚ್ಚು ಕಾಲಾವಕಾಶ ಕೂಡ ನೀಡಲಿಲ್ಲ. ವಾಹನ ಏರಿದ ಅಧಿಕಾರಿಗಳು ಮನೆ ಮನೆಗೆ ಧಾವಿಸಿ ಹೆಸರು ನೀಡಿದವರು ನಿಜವಾದ ಮತದಾರರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಯಿತು.
ಜಿಲ್ಲಾಧಿಕಾರಿ ಅವರು ಇಷ್ಟು ಬಿಗಿ ನಿಲುವು ತೆಗೆದುಕೊಳ್ಳಲು ಕಾರಣ ಇತ್ತು. ಕಳೆದ ಪಾಲಿಕೆ ಚುನಾವಣೆಯಲ್ಲಿ ಮಂಗಳೂರಿನ ಮತಗಟ್ಟೆಯೊಂದಕ್ಕೆ ಕಾಲೇಜು ಬಸ್ಸೊಂದರಲ್ಲಿ ಬಂದಿದ್ದ ಯುವ ಮತದಾರರು, ಗುಂಪು ಗುಂಪಾಗಿ ಮತ ಚಲಾಯಿಸಿದ್ದರು. ಸಹಜವಾಗಿಯೇ ಭಾರಿ ಶಂಕೆ ವ್ಯಕ್ತವಾಗಿತ್ತು.
ಜಿಲ್ಲಾಧಿಕಾರಿ ಅವರು ಪ್ರತಿದಿನ ಹತ್ತಾರು ಸಭೆಗಳನ್ನು ನಡೆಸುತ್ತಿದ್ದಾರೆ, ಸಲಹೆ, ಸೂಚನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕೇವಲ ಸಭೆಗಳನ್ನೇ ನಡೆಸುತ್ತಿದ್ದರೆ, ಅದರ ಪಾಲನೆಯ ನಿಗಾ ವಹಿಸುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.