ಹರಿಹರ: `ಹೆಣ್ಣು ಭ್ರೂಣಹತ್ಯೆಯಿಂದ ಮಹಿಳೆ ಹಾಗೂ ಪುರುಷರ ಅನುಪಾತದ ಅಂತರ ಹೆಚ್ಚಾಗುತ್ತಿದೆ~ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೋಮವಾರ ನಡೆದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಹೆಣ್ಣು ಹೆತ್ತವರು ಬಹಳ ಹಿಂಸೆ ಅನುಭವಿಸುತ್ತಿದ್ದರು. ಹೆಣ್ಣು ಹೆರುವುದೇ ಪಾಪ ಎಂಬಂಥ ಭಾವನೆಗಳಿದ್ದವು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮೀ ಯೋಜನೆಯಿಂದ ಹೆಣ್ಣು ಹೆತ್ತವರು ನೆಮ್ಮದಿಯಾಗಿ ಜೀವಿಸುತ್ತಿದ್ದಾರೆ. ಸೌಲಭ್ಯಗಳು ಹಾಗೂ ಸೌಕರ್ಯಗಳು ಅರ್ಹ ಫಲಾನುಭವಿಗಳನ್ನು ಮುಟ್ಟಿದಾಗ ಯೋಜನೆ ಯಶಸ್ವಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 74 ಅರ್ಹ ಫಲಾನುಭವಿಗಳಿಗೆ ಬಾಂಡ್ ವಿತರಣೆ ಮಾಡಲಾಯಿತು. ಜಿ.ಪಂ. ಅಧ್ಯಕ್ಷ ಎಸ್.ಎಂ. ವೀರೇಶ್, ನಗರಸಭೆ ಅಧ್ಯಕ್ಷೆ ರಾಧಾ ಸಿ.ಎನ್. ಹುಲಿಗೇಶ್, ಜಿ.ಪಂ. ಸದಸ್ಯ ಟಿ. ಮುಕುಂದ, ತಾ.ಪಂ. ಇಒ ಎಚ್.ಎನ್. ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.