ಬೆಂಗಳೂರು: ಮೂರನೇ ಬಾರಿಯೂ ಹೆಣ್ಣು ಮಗು ಜನಿಸಿತೆಂದು ಮನನೊಂದ ತಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯನಗರ ಸಮೀಪದ ಗಾಯಿತ್ರಿ ನಗರದಲ್ಲಿ ನಡೆದಿದೆ.
ಗಾಯಿತ್ರಿ ನಗರ ಎಂಟನೇ ಅಡ್ಡರಸ್ತೆ ನಿವಾಸಿ ಲಕ್ಷ್ಮಣ (30) ಆತ್ಮಹತ್ಯೆ ಮಾಡಿಕೊಂಡವರು. ಕಾರು ಚಾಲಕರಾಗಿದ್ದ ಅವರು ಪತ್ನಿ ಅಲುಮೇಲಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಅಲುಮೇಲಮ್ಮ ಅವರು ಹೆರಿಗೆಗಾಗಿ ಒಂದೂವರೆ ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು. ಅವರಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿತ್ತು. ಮೂರನೇ ಬಾರಿಯೂ ಹೆಣ್ಣು ಮಗು ಜನಿಸಿದ್ದರಿಂದ ಲಕ್ಷ್ಮಣ ಅವರು ಬೇಸರಗೊಂಡು ಅ.19ರಂದು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಲಕ್ಷ್ಮಣ ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಠಾಣೆಗೆ ಶುಕ್ರವಾರ ಮಾಹಿತಿ ನೀಡಿದರು. ಮನೆಯ ಬಳಿ ತೆರಳಿ ಪರಿಶೀಲಿಸಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.