ತುಮಕೂರು: ಇಂದಿಗೂ ಹೆಣ್ಣು ಮಗವಿನ ಬಗ್ಗೆ ತಾತ್ಸಾರ ಕಡಿಮೆ ಆಗಿಲ್ಲ. ಎಲ್ಲ ತಾರತಮ್ಯಗಳನ್ನು ಮೆಟ್ಟಿ ನಿಲ್ಲಲು ಹೆಣ್ಣು ಮಗುವನ್ನು ತಯಾರಿ ಮಾಡುವುದೆ `ರಾಷ್ಟ್ರೀಯ ಹೆಣ್ಣು ಮಗುವಿನ ದಿನ~ದ ಉದ್ದೇಶ ಎಂದು ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ ವತಿಯಿಂದ ನಡೆದ `ರಾಷ್ಟ್ರೀಯ ಹೆಣ್ಣು ಮಗು~ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಣ್ಣು ಭ್ರೂಣ ಹತ್ಯೆ, ಶೈಕ್ಷಣಿಕ, ಉದ್ಯೋಗ ಅವಕಾಶದಲ್ಲಿ ತಾರತಮ್ಯ, ಹೆಚ್ಚುತ್ತಿರುವ ಹೆಣ್ಣು ಶಿಶು ಮರಣದಂತಹ ಅನಿಷ್ಟಗಳ ವಿರುದ್ಧ ಪ್ರಜ್ಞಾವಂತ ಮಹಿಳೆಯರು ಸೆಣಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ `ಹದಿಹರೆಯ ಮತ್ತು ಸವಾಲುಗಳು~ ಕುರಿತು ಚಿಂತನಾಗೋಷ್ಠಿ ನಡೆಯಿತು. ತುಮಕೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸದಸ್ಯೆ ಸಿ.ಎಲ್.ಸುನಂದಮ್ಮ, ಸಮಾಜ ಸೇವಕರಾದ ಅನಸೂಯ, ಲಲಿತಾ ಮಲ್ಲಪ್ಪ, ಗಂಗಲಕ್ಷ್ಮೀ, ಸರ್ವಮಂಗಳಾ ಮತ್ತಿತರರು ವಿಷಯ ಮಂಡಿಸಿದರು. ಉಪನ್ಯಾಸಕಿ ಅಕ್ಕಮ್ಮ ಅರಿವಿನ ಗೀತೆ ಹಾಡಿದರು. ನಗರದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನದಂದು ಹುಟ್ಟಿದ ಹೆಣ್ಣು ಮಕ್ಕಳಿಗೆ ಹೊಸ ಉಡುಗೆ ವಿತರಿಸಲಾಯಿತು.