ಚನ್ನಮ್ಮನ ಕಿತ್ತೂರು: `ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಇಲ್ಲಿಗೆ ಸಮೀಪದ ಇಟಗಿ ಕ್ರಾಸ್ ಬಳಿ ಪದೇ, ಪದೇ ಸಂಭವಿಸುತ್ತಿರುವ ಅಪಘಾತಗಳಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಅಪಘಾತ ತಪ್ಪಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನೀಡಿದ ಭರವಸೆಯಂತೆ ಕ್ರಮ ಕೈಗೊಳ್ಳದ ಕಾರಣ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಲಾಗುವುದು~ ಎಂದು ವಕೀಲ ದೀಪಕ ಅಂಬಲಿ ಹೇಳಿದರು.
`ಈ ಕ್ರಾಸ್ ಈಗ ಅಪಘಾತದ ವಲಯವಾಗಿ ಪರಿವರ್ತನೆ ಹೊಂದಿದೆ. ಅನೇಕ ಅಮಾಯಕ ಜೀವಿಗಳು ಬಲಿಯಾಗಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾಯಕರ ಸಾವನ್ನು ತಪ್ಪಿಸಲು `ಅಂಡರ್ ಪಾಸ್~ ನಿರ್ಮಾಣ ಮಾಡಿ ಎಂದು ಪ್ರಾದೇಶಿಕ ಆಯುಕ್ತ, ಜಿಲ್ಲಾಧಿಕಾರಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಮನವಿಪತ್ರ ನೀಡಿದರೂ ಅದಕ್ಕೆ ಕವಡೆ ಕಿಮ್ಮತ್ತು ಸಿಕ್ಕಿಲ್ಲ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
`ಅನೇಕ ಹಿರಿಯ ಅಧಿಕಾರಿಗಳು ಮನವಿ ಸ್ವೀಕರಿಸಿದ್ದಾರೆ. ಪರಿಹಾರ ನಮ್ಮ ಕೈಯಲ್ಲಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಇತ್ತ ಏನೂ ತಪ್ಪ ಮಾಡದ ನತದೃಷ್ಟರ ಪ್ರಾಣ ಹೋಗುತ್ತಲೇ ಇವೆ. ಕನಿಷ್ಠ ನೂರರ ಸಮೀಪವಾದರೂ ಇಲ್ಲಿ ಅಪಘಾತ ಸಂಭವಿಸಿವೆ. ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಪ್ರಾಣನಷ್ಟವಾಗುತ್ತಿದ್ದರೂ ಹಿರಿಯ ಸಂಬಂಧಿಸಿದ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ~ ಎಂದು ಅವರು `ಮನವಿ, ಪ್ರತಿಭಟನೆಯಿಂದ ಪರಿಹಾರ ದೊರಕದೇ ಇರುವಾಗ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ~ ಎಂದು ಹೇಳಿದರು.