ಕಿಕ್ಕೇರಿ: ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಪಿಎಸ್ಐ ಜಿ.ಜಿ. ಯಶ್ವಂತಕುಮಾರ್ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.
ಎರಡು ವಾರಗಳ ಹಿಂದೆ ಈ ಸ್ಥಳದಲ್ಲಿ ಕಂಡ ಭೀಕರ ಅಪಘಾತ ಮನಗಂಡು ಸ್ವಯಂಪ್ರೇರಣೆಯಿಂದ ಪಿಎಸ್ಐ ಅವರು ಕರವೇ ಹೋಬಳಿ ಘಟಕದೊಂದಿಗೆ ಶುಚಿಗೊಳಿಸಿದರು.
ಸ್ಥಳೀಯ ಮುಖಂಡರು ಮುಂದಾಗಿ ಹಿಟಾಚಿಯೊಂದಿಗೆ ಆಗಮಿಸಿ ಶ್ರಮದಾನಕ್ಕೆ ಮುಂದಾದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಸ್ತೆಗೆ ಮರೆಯಾಗಿದ್ದ ಗಿಡಗಂಟಿ, ಮರ ಕಿತ್ತರು.
‘ಎಲ್ಲ ಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿ ಹತ್ತಾರು ಜೀವಗಳು ಉಳಿಸುವ ಕೆಲಸ ಮಾಡಿದ್ದಾರೆ’ ಎಂದು ಸ್ಥಳೀಯ ಮುಖಂಡ ಗೋಪಾಲ್ ನುಡಿದರು.
ಶ್ರಮದಾನದ ನಂತರ ಮಾತನಾಡಿದ ಪಿಎಸ್ಐ ಯಶ್ವಂತ್, ಅರಿವು ಮೂಡಿಸಲು ಯತ್ನಿಸಿ ಯಶಸ್ಸು ಕಂಡಿರುವೆ. ತಿರುವಿನಲ್ಲಿ ಗ್ರೀನ್ಲೈನ್, ನಾಮಫಲಕ ವ್ಯವಸ್ಥೆ ಮಾಡಿ ಅಪಘಾತದ ಪ್ರಮಾಣ ತಗ್ಗಿಸಲು ಯತ್ನಿಸುವುದು ತಮ್ಮ ಗುರಿಯಾಗಿದೆ’ ಎಂದರು.
ಕರವೇ ಹೋಬಳಿ ಅಧ್ಯಕ್ಷ ಗುರುಮೂರ್ತಿ, ಎನ್ಎಸ್ಎಸ್ ಯೋಜನಾಧಿಕಾರಿ ಲೇಪಾಕ್ಷಿಗೌಡ, ತಾಲ್ಲೂಕು ಉಪವಲಯ ಅರಣ್ಯಾಧಿಕಾರಿ ಸಿದ್ಧರಾಜು, ಚಿಕ್ಕಮಾದಯ್ಯ, ಮುಖಂಡರಾದ ಗೋಪಾಲ್, ಗ್ರಾಪಂ.ಸದಸ್ಯರಾದ ರವಿ, ಚಿಕ್ಕೇಗೌಡ, ನಾಗೇಶ್, ಆಟೋ ಜಗದೀಶ್, ಉಮೇಶ್, ಅರುಣ್ ಇದ್ದರು.