ಬೆಂಗಳೂರು: `ನಿಯಮ ಮೀರಿ ಅತಿಯಾದ ಭಾರ ಸಾಗಣೆ ಮಾಡುವ ವಾಹನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆಯ್ದ ರಸ್ತೆ- ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ವೆಹಿಕಲ್ ವೇಯಿಂಗ್ ಸಾಧನವನ್ನು ಅಳವಡಿಸಲಾಗುವುದು~ ಎಂದು ಸಾರಿಗೆ ಸಚಿವ ಆರ್. ಅಶೋಕ ಹೇಳಿದರು.
ನಗರದ ಜಯನಗರ 4ನೇ ಬಡಾವಣೆಯಲ್ಲಿರುವ ಟಿಟಿಎಂಸಿ ಕಟ್ಟಡದ 2ನೇ ಮಹಡಿಗೆ ಸ್ಥಳಾಂತರಗೊಂಡ ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್ಟಿಒ) ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
`ಅತಿಯಾದ ಭಾರ ಸಾಗಣೆ ಮಾಡುವ ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ. ಇದನ್ನು ತಡೆಗಟ್ಟುವ ಸಲುವಾಗಿ ಈ ಸಾಧನವನ್ನು ಆಯ್ದ ರಸ್ತೆಗಳಲ್ಲಿ ಅಳವಡಿಸಲಾಗುವುದು. ಸರಕು ಸಾಗಣೆ ವಾಹನವು ಆ ರಸ್ತೆಯಲ್ಲಿ ಹಾದು ಹೋದ ಮರುಕ್ಷಣವೇ ಆ ವಾಹನದ ಒಟ್ಟು ತೂಕ ದಾಖಲಾಗುತ್ತದೆ. ಇದರಿಂದ ಅಕ್ರಮ ಪತ್ತೆ ಹಚ್ಚಬಹುದು ಎಂದರು.
ಅತಿಯಾದ ಭಾರ ಸಾಗಣೆ ಮಾಡುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ~ ಎಂದರು.
`ನಿಯಮ ಮೀರಿ ಅತಿಯಾದ ಭಾರ ಸಾಗಣೆ ಮಾಡುವ ವಾಹನಗಳಿಗೆ ದುಬಾರಿ ದಂಡ ವಿಧಿಸಲಾಗುವುದು. ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ 1,400 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇದರಲ್ಲಿ ದಂಡ ಶುಲ್ಕದ ಪ್ರಮಾಣವೂ ಗಣನೀಯವಾಗಿದೆ~ ಎಂದು ಹೇಳಿದರು.
`ಹಾಗೆಯೇ ಪ್ರತಿ ಚೆಕ್ಪೋಸ್ಟ್ಗಳಲ್ಲಿ ಇ-ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇದರಿಂದ ಆದಾಯ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ. ಒಟ್ಟಿನಲ್ಲಿ ಇಲಾಖೆಯಲ್ಲಿ ಪಾರದರ್ಶಕತೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದರು.