ಕುಷ್ಟಗಿ: ತಾಲ್ಲೂಕಿನ ಹೆಸರೂರು ಗ್ರಾಮದ ಬಳಿ ಇರುವ ಹಳ್ಳದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ಮುಂದುವರೆದಿದ್ದು ಇಡೀ ಹಳ್ಳ ಬಟಾಬಯಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸದರಿ ಹಳ್ಳದಲ್ಲಿ ಕಿ.ಮೀ. ಗಟ್ಟಲೆ ಮರಳನ್ನು ಬಗೆದಿರುವುದರಿಂದ ಹಳ್ಳದಲ್ಲಿ ಆಳದ ಗುಂಡಿಗಳು ನಿರ್ಮಾಣಗೊಂಡಿವೆ. ಸಾಕಷ್ಟು ಪ್ರಮಾಣದಲ್ಲಿ ಮರಳು ಬಗೆದಿರುವುದರಿಂದ ಹಳ್ಳದಲ್ಲಿ ನೀರು ನಿಲ್ಲದೇ ಭಣಗುಡುತ್ತಿದೆ. ಸದಾ ನೀರು ಜಿನುಗುತ್ತಿದ್ದ ಹಳ್ಳ ತಳಕಂಡಿದೆ. ಜನ ಜಾನುವಾರು ಪಶುಪಕ್ಷಿಗಳಿಗೆ ನೀರಿನ ಆಸರೆ ಇಲ್ಲದಂತಾಗಿದೆ ಎಂದು ಜನ ಹೇಳಿದರು.
ಮರಳು ಬಗೆಯುವುದಕ್ಕಾಗಿ ಕುಷ್ಟಗಿ ಅಲ್ಲದೇ ಇಂಗ್ರೇಜಿ (ಇಳಕಲ್) ಭಾಗದ ಬಹಳಷ್ಟು ಟ್ರ್ಯಾಕ್ಟರ್ಗಳು ನಿತ್ಯ ಹಳ್ಳದಲ್ಲಿರುತ್ತವೆ. ಅಕ್ಕಪಕ್ಕದ ಹೊಲಗಳ ಮಾಲೀಕರು ಪ್ರತಿ ಟ್ರ್ಯಾಕ್ಟರ್ಗೆ ₨ 200ರಂತೆ ಮಾರಾಟ ಮಾಡುತ್ತಿದ್ದಾರೆ. ತಮ್ಮದಲ್ಲದ ಹಳ್ಳದಲ್ಲಿ ಗುಂಡಿ ತೋಡಿ ಮರಳು ಮಾರಾಟ ಮಾಡುವುದಕ್ಕೆ ಪೈಪೋಟಿಗಿಳಿದಿದ್ದಾರೆ. ಅಲ್ಲದೇ ಮರಳಿಗಾಗಿ ನಿತ್ಯ ಹೊಡೆದಾಟಗಳು ನಡೆಯುತ್ತಿದ್ದು ಗ್ರಾಮದಲ್ಲಿನ ಅಶಾಂತಿಗೆ ಕಾರಣವಾಗಿದೆ ಎಂದು ಜನ ತಿಳಿಸಿದರು.
ದಾರಿ ಇಲ್ಲ: ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಬಸಾಪುರಕ್ಕೆ ಸಂಪರ್ಕ ಕಲ್ಪಿಸುವ ರೈತರು ಬಳಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ, ಎತ್ತಿನಗಾಡಿ, ವಾಹನಗಳು ಹೋಗುವುದಿಲ್ಲ, ಸುಗ್ಗಿಕಾಲವಾಗಿರುವುದರಿಂದ ರಾಶಿ ಮಾಡಿದ ಧಾನ್ಯಗಳ ಮೂಟೆಗಳನ್ನು ಸಾಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಲದಿಂದ ಮನೆಗೆ ರಾಶಿ ಹೇರುವುದು ಹೇಗೆ ಎಂಬುದು ತಿಳಿಯದಾಗಿದೆ ಎಂಬ ಚಿಂತೆ ಅಲ್ಲಿನ ರೈತರದ್ದಾಗಿದೆ.