ಬೆಳಗಾವಿ: ಉಚಗಾವಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ಕನಿಷ್ಠ 8 ಗಂಟೆಗಳ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಸಂಬಂಧ ಹೆಸ್ಕಾಂ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಆ ಭಾಗದ ಸಾರ್ವಜನಿಕರು ಸೋಮವಾರ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಯಾವುದೇ ವಿದ್ಯುತ್ ಕಡಿತ ಜಾರಿಯಲ್ಲಿಲ್ಲ. ಆದರೂ ಇಲಾಖೆ ಉಚಗಾವಿ ಭಾಗದಲ್ಲಿ ವಿದ್ಯುತ್ ಕಡಿತ ಮಾಡುತ್ತಿದೆ. ಉಚಗಾವಿಯಲ್ಲಿ ಪ್ರಸ್ತುತ ಮಳೆಕರಣಿ ಉತ್ಸವ ಜರುಗುತ್ತಿದ್ದು, ವಿದ್ಯುತ್ ಕಡಿತದಿಂದ ಸಮಸ್ಯೆಯಾಗಿದೆ. ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಯ ನೇತೃತ್ವವನ್ನು ರಂಜನಾ ಜಾಧವ, ರಾಮಾ ಕದಂ, ನಾನಾ ಗಡ್ಕರಿ, ಬಂಡು ಪಾಟೀಲ, ಸಂಭಾಜಿ ಕಿಲ್ಲೇದಾರ, ಶಾಲು ಫರ್ನಾಂಡಿಸ್, ಮಧು ಬೆಳಗಾಂವ್ಕರ್ ಮತ್ತಿತರರು ವಹಿಸಿದ್ದರು.