ಕೃಷ್ಣರಾಜಪೇಟೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ಬೆಟ್ಟದ ಮೇಲಿರುವ ಕಲ್ಯಾಣ ವೆಂಕಟರಮಣ ಸ್ವಾಮಿಗೆ ಪ್ರತಿವರ್ಷ ರಥಸಪ್ತಮಿ ದಿನ ರಥೋತ್ಸವ ನಡೆಯುತ್ತದೆ. ಜೊತೆಗೆ ಇಲ್ಲಿನ ಬಯಲಿನಲ್ಲಿ ನಡೆಯುವ ಜಾನುವಾರು ಜಾತ್ರೆಗೆ ರಾಜ್ಯದ ವಿವಿಧ ಭಾಗಳಿಂದ ರಾಸುಗಳು ಬರುತ್ತವೆ.
ಈ ಬಾರಿ ಜಾನುವಾರು ಜಾತ್ರೆಯು ಫೆ.2 ರಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಜಾನುವಾರುಗಳು ಜಾತ್ರೆ ಮಾಳಕ್ಕೆ ಬಂದು ಸೇರುತ್ತಿವೆ. ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರುವರಿಯಲ್ಲಿ ನಡೆಯುವ ಈ ಜಾತ್ರೆಗೆ ನೆರೆಯ ಮೈಸೂರು, ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜಾನುವಾಗಳು ಬರುತ್ತಿವೆ. ರೂ 10 ಸಾವಿರದಿಂದ ರೂ. 2 ಲಕ್ಷ ಬೆಲೆ ಜಾನುವಾರು ಇರುತ್ತವೆ. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು.
ಸೀಮೆಯವರು ಎಂದೇ ಗುರುತಿಸಿಕೊಂಡಿರುವ ಹಾವೇರಿ, ದಾವಣಗೆರೆ, ವಿಜಾಪುರ, ಹುಬ್ಬಳ್ಳಿ ಭಾಗಗಳ ವ್ಯಾಪಾರಿಗಳು ರಾಸುಗಳನ್ನು ಖರೀದಿಸಲು ಬರುತ್ತಾರೆ.
ಹೇಮಾವತಿ ನದಿ ತಟದಲ್ಲಿ ನಡೆಯುವ ಗ್ರಾಮೀಣ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಜಾತ್ರೆ ಎಲ್ಲ ನಿಟ್ಟಿನಿಂದಲೂ ಜನರ ಮನಸ್ಸಿಗೆ ಮುದ ನೀಡುತ್ತದೆ. ಒಂದು ವಾರ ನಡೆಯುವ ಈ ಜಾತ್ರೆ ಸಂಭ್ರಮ ರಥೋತ್ಸವದ ವೇಳೆಗೆ ಕಡಿಮೆಯಾದರೂ ಜನಗಳ ಜಾತ್ರೆ ತೆಪ್ಪೋತ್ಸವದವರೆಗೂ ಮುಂದುವರೆಯುತ್ತದೆ.