ಹೊಳೆನರಸೀಪುರ: ಕ್ಷೇತ್ರದ ಶಾಸಕರು ಅವಶ್ಯಕತೆ ಇಲ್ಲದಿದ್ದರೂ ಹೇಮಾವತಿ ನದಿಗೆ ತಡೆಗೋಡೆ ನಿರ್ಮಿಸಲು ಸುಳ್ಳುದಾಖಲೆ ನೀಡಿದ್ದಾರೆ. ಇದರ ಹಿಂದೆ ಸ್ವಾರ್ಥವೂ ಇದೆ. ಬಾಲಕಿಯರ ಪದವಿ ಪೂರ್ವ ಸರ್ಕಾರಿ ಕಾಲೇಜಿನ ಪಕ್ಕ ನಿರ್ಮಿಸುತ್ತಿರುವ ಕಲ್ಯಾಣ ಮಂಟಪ ನಿರ್ಮಾಣದ ವೇಳೆ ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿದ್ದಾರೆ.
ಶಾಲೆಯ ಜಾಗವನ್ನೂ ಒತ್ತುವರಿ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಮಾಡಿರುವ ಆರೋಪ ಸತ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಕೀಲ ಸೂರನಹಳ್ಳಿ ಮೋಹನ್ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಂಗೆರೆ ರಘು ಎನ್ನುವವರು ಇದೆಲ್ಲಾ ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ರಘು ಅವರು ಇದು ಸುಳ್ಳು ಎಂದು ಸಾಬೀತು ಪಡಿಸಿದರೆ ನಾವು ಸಾಮೂಹಿಕ ರಾಜಿನಾಮೆ ನೀಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಹೇಮಾವತಿ ನದಿ ದಡದಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಅವಶ್ಯಕತೆ ಇರಲಿಲ್ಲ., ಸೂರನಹಳ್ಳಿ ಗ್ರಾಮದ 87 ಎಕರೆ ನೀರಾವರಿ ಭೂಮಿಯನ್ನು ಆಶ್ರಯ ಯೋಜನೆಗೆ ಸ್ವಾಧೀನಪಡಿಸಿ, 15 ವರ್ಷಗಳಿಂದಲೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಹಣ ನೀಡದೇ ಗೋಳಾಡಿಸುತ್ತಿರುವುದು ಸುಳ್ಳಲ್ಲ. ಸೂರನಹಳ್ಳಿ ರೈತರು ಜಮೀನನ್ನು ಬಿಟ್ಟುಕೊಡದ ದ್ವೇಷಕ್ಕಾಗಿ ಅವರ ಜಮೀನಿನ ಮೇಲೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಮುಂದಾಗಿ ಸರ್ಕಾರಕ್ಕೆ 9 ಕೋಟಿ ರೂ ನಷ್ಟ ಉಂಟುಮಾಡಿದ್ದಾರೆ.
ಪಟ್ಟಣದ ರೈಲ್ವೇ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಮಧ್ಯದಲ್ಲಿ ಪುರಸಭೆ ಹರಾಜಿನಲ್ಲಿ ಸಾರ್ವಜನಿಕರು ಖರೀದಿಸಿದ್ದ 70 ನಿವೇಶನಗಳನ್ನು ಕಾನೂನಿಗೆ ವಿರುದ್ದವಾಗಿ ಭೂಸ್ವಾಧೀನ ನಡೆಸಿ ಅವರ ಬಾಳನ್ನು ನರಕಕ್ಕೆ ದೂಡಿದ್ದಾರೆ. ಶಾಸಕ ರೇವಣ್ಣ ತಮ್ಮ ಮಕ್ಕಳ ಹೆಸರಿನಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪಕ್ಕಾಗಿ ಪಕ್ಕದ ಸರ್ಕಾರಿ ಬಾಲಕಿಯರ ಕಾಲೇಜಿನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕಲ್ಯಾಣ ಮಂಟಪ ನಿರ್ಮಾಣದ ವೇಳೆ ಸರ್ಕಾರಿ ನಿಯಮ ಉಲ್ಲಂಘಿ ಸಿದ್ದಾರೆ. ಈ ಆರೋಪಗಳನ್ನು ನಾವು ಸಾಬೀತು ಪಡಿಸುತ್ತೇವೆ ಎಂದು ಮೋಹನ್ ತಿಳಿಸಿದರು.
ದುದ್ದ ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಜಲೇಂದ್ರ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.