ನವದೆಹಲಿ (ಪಿಟಿಐ): ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾಗಿರುವುದು ಹೇಗೆ ಎಂದು ಪ್ರಶ್ನಿಸಿರುವ ದೆಹಲಿ ನ್ಯಾಯಾಲಯ, ಈ ಕುರಿತು ಸಿಬಿಐ ನಿರ್ದೇಶಕರು ವಿವರಣೆ ನೀಡಬೇಕೆಂದು ಆದೇಶಿಸಿದೆ.
ಈ ಬಗ್ಗೆ ಫೆಬ್ರುವರಿ 15ರ ಒಳಗೆ ಉತ್ತರ ನೀಡುವಂತೆ ಹೆಚ್ಚುವರಿ ಮುಖ್ಯ ವೆುಟ್ರೋಪಾಲಿಟಿನ್ ನ್ಯಾಯಾಧೀಶರಾದ ಸಂಜಯ್ ಬನ್ಸಲ್ ಶುಕ್ರವಾರ ಆದೇಶಿಸಿದ್ದಾರೆ.ಸಿಬಿಐ ಮತ್ತು ‘ತೆಹಲ್ಕಾ’ ನಿಯತಕಾಲಿಕೆ ಉದ್ದೇಶಪೂರ್ವಕವಾಗಿ ಸ್ವಾಮಿ ಅಸೀಮಾನಂದ ಅವರ ತಪ್ಪೊಪ್ಪಿಗೆ ಹೇಳಿಕೆಯನ್ನು ಸೋರಿಕೆ ಮಾಡಿವೆ ಎಂದು ಆರೋಪಿಸಿ ಆರ್ಎಸ್ಎಸ್ ಕಾರ್ಯನಿರ್ವಾಹಕ ದೇವೇಂದ್ರ ಗುಪ್ತಾ ಅವರು ಸಲ್ಲಿಸಿರುವ ದೂರಿನ ವಿಚಾರಣೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ.
ಕಳೆದ ಡಿಸೆಂಬರ್ 18ರಂದು ದೆಹಲಿ ಮೆಟ್ರೋಪಾಲಿಟಿನ್ ನ್ಯಾಯಾಲಯ ಸ್ವಾಮಿ ಅಸೀಮಾನಂದ ಅವರ ಹೇಳಿಕೆಯನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಂಡಿತ್ತು.