ಬೆಂಗಳೂರಿನಲ್ಲಿ ನೆಲೆಸಿರುವ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳ ಜನರನ್ನು ಒಗ್ಗೂಡಿಸಲು ಸ್ಥಾಪನೆಯಾಗಿದೆ ಹೈ ಕ ಪ್ರದೇಶದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ. ಅದು ಅಲ್ಲಿನ ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಊಟ, ಹಾಡು, ನೃತ್ಯ ಹಾಗೂ ಸನ್ಮಾನಗಳನ್ನು ಒಳಗೊಂಡ ಸಾಂಸ್ಕೃತಿಕ ಹಬ್ಬ ಆಯೋಜಿಸಿತ್ತು.
ಅಲ್ಲಿ ಪಕ್ಕಾ ಹೈದ್ರಾಬಾದ್ ಕರ್ನಾಟಕ ಭಾಗದ ಜೋಳ ಮತ್ತು ಸಜ್ಜೆ ಕಡಕ್ ರೊಟ್ಟಿ, ತರಹೇವಾರಿ ಚಟ್ನಿಪುಡಿ, ಶೇಂಗಾ ಹೋಳಿಗೆ, ಗೋಧಿ ಹುಗ್ಗಿ ಹಾಗೂ ಕಡುಬು, ಪಲ್ಯ, ಮೆಣಸಿನಕಾಯಿ ಒಳಗೊಂಡ ವಿಶಿಷ್ಟ ಭೋಜನ ಆಹ್ವಾನಿತರ ಹೊಟ್ಟೆ ತಣಿಸಿತು.
ಇದೇ ಸಂದರ್ಭದಲ್ಲಿ ಹೈ ಕ ಪ್ರದೇಶದಿಂದ ಬಂದು ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಕೃಷಿ ಆಯುಕ್ತ ಬಾಬುರಾವ್ ಮುಡಬಿ, ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ ಪಾಟೀಲ, ಕ್ಯಾನ್ಸರ್ ತಜ್ಞ ಡಾ. ಶೇಖರ್ ಪಾಟೀಲ, ಪತ್ರಕರ್ತ ರವೀಂದ್ರ ರೇಷ್ಮೆ, ನಟ ವೈಜನಾಥ ಬಿರಾದಾರ, ಸಾಹಿತಿ ಈರಪ್ಪ ಕಂಬಳಿ, ಶಿಕ್ಷಣ ತಜ್ಞ ಡಾ. ಚಂದ್ರಶೇಖರ್ ಬುಗ್ಗಿ, ಪರಿಸರ ತಜ್ಞ ಕೇದಾರ ಮುದ್ದ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಣಿಗೆ ಹಬ್ಬ ಉಂಟು ಮಾಡಿತು.