‘ಮೂವರು ನಿರ್ದೇಶಕರು (ಸಾಧು ಕೋಕಿಲ, ರಾಜೇಂದ್ರ ಕಾರಂತ್, ಗುಬ್ಬಿ ವಿಜಿ) ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ತ್ರಿವಳಿ ನಿರ್ದೇಶಕರಿಗೆ ನಾನು ನಿರ್ದೇಶಕನಾಗಿದ್ದೇನೆ. ಪಕ್ಕಾ ಹಾಸ್ಯಪ್ರಧಾನ ಚಿತ್ರ ಇದು. ನೋ ಲಾಜಿಕ್ ಓನ್ಲಿ ಮ್ಯಾಜಿಕ್’– ಇಂದು (ಜ.10) ಬಿಡುಗಡೆಯಾಗುತ್ತಿರುವ ‘ನಗೆ ಬಾಂಬ್’ ಚಿತ್ರದ ನಿರ್ದೇಶಕ ನಾಗೇಂದ್ರ ಅರಸ್ ಸುದ್ದಿಗೋಷ್ಠಿಯಲ್ಲಿ ತಮ್ಮ ಚಿತ್ರದ ಸ್ವಾರಸ್ಯಗಳನ್ನು ಉಲ್ಲೇಖಿಸಿದ್ದು ಹೀಗೆ.
‘ಡೈಲಾಗ್, ಸನ್ನಿವೇಶ, ಕಳ್ಳ ಪೊಲೀಸರಾಟ ಸೇರಿದಂತೆ ಚಿತ್ರಕಥೆಯನ್ನು ಶೇ 100ರಷ್ಟು ಕಾಮಿಡಿಯಲ್ಲಿ ಅದ್ದಲಾಗಿದೆ. ಕ್ಲೈಮ್ಯಾಕ್ಸಿನಲ್ಲಿ ಒಂದು ಸಣ್ಣ ಸಂದೇಶವಿದೆ. ‘ನಗೆ ಬಾಂಬ್’ ಕಿಂಗ್ ಆಫ್ ಕಾಮಿಡಿ’ಎಂದು ನಾಗೇಂದ್ರ ಅರಸ್ ಬಣ್ಣಿಸಿದರು.
‘ಇಡೀ ರಾಜ್ಯದ ಮೂಲೆ ಮೂಲೆಗಳಿಗೂ ನಗೆ ಬಾಂಬ್ ಹಾಕಲು ಹೊರಟಿದ್ದೇವೆ. ಇಲ್ಲಿ ನಾನೊಬ್ಬ ಹೀರೊ ಅಲ್ಲ, ಪ್ರತಿ ಪಾತ್ರಗಳೂ ನಾಯಕನ ಸ್ಥಾನದಲ್ಲಿವೆ. ರಾಜೇಂದ್ರ ಕಾರಂತ್ ಚಿತ್ರದ ನೈಜ ನಾಯಕ’ ಎಂದವರು ಚಿತ್ರದ ನಾಯಕ ನಟ ರವಿಶಂಕರ್. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಮೊದಲ ಬಾರಿ ಹಣಹೂಡಿದ್ದಾರೆ. ಚಿತ್ರ 11 ಭಾಷೆಗಳಿಗೆ ಡಬ್ ಆಗಲಿದೆಯಂತೆ.
‘ನಗೆಬಾಂಬ್ ಹಾಕುವಷ್ಟು ಶಕ್ತರಿರುವ ಟೆರರಿಸ್ಟುಗಳೆಲ್ಲ ಇಲ್ಲಿ ಕೆಲಸ ಮಾಡಿದ್ದಾರೆ’ ಎನ್ನುವುದು ಚಿತ್ರದ ಬಗ್ಗೆ ರಾಜೇಂದ್ರ ಕಾರಂತ್ ಅವರ ಬಣ್ಣನೆ. ಮಾರುಕಟ್ಟೆಯನ್ನು ಕಂಡುಕೊಳ್ಳದಿದ್ದರೆ ಯಾವುದೇ ಒಳ್ಳೆಯ ಚಿತ್ರವೂ ಉಳಿಯುವುದಿಲ್ಲ ಎಂದು ತನ್ನ ನಿರ್ದೇಶನದ ಚಿತ್ರವನ್ನು ಉಲ್ಲೇಖಿಸಿದ ಅವರು– ‘ನಗೆಬಾಂಬ್’ ಯಶಸ್ಸು ಗಳಿಸುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ನಟ ಲಯನ್ ರಾವ್, ನಾಯಕಿ ಅನಿತಾಭಟ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.