ರಾಯಚೂರು: ಒಂದೇ ಬೆಳೆಯನ್ನೇ ನೆಚ್ಚಿಕೊಂಡು ಕೈ ಸುಟ್ಟುಕೊಳ್ಳುವುದಕ್ಕಿಂತ ಲಾಭದಾಯಕ ಮತ್ತು ಖರ್ಚು ಕಡಿಮೆ ಇರುವ ರೇಷ್ಮೆ ಕೃಷಿಯತ್ತ ಹೈದರಾಬಾದ್ ಕರ್ನಾಟಕ ಪ್ರದೇಶದ ರೈತರು ಗಮನ ಹರಿಸಬೇಕು. ಏಪ್ರಿಲ್ ಮತ್ತು ಮೇ ತಿಂಗಳು ಹೊರತುಪಡಿಸಿ ಮಿಕ್ಕ ಎಲ್ಲ ತಿಂಗಳಲ್ಲೂ ರೇಷ್ಮೆ ಬೆಳೆಯನ್ನು ಈ ಪ್ರದೇಶದಲ್ಲಿ ಬೆಳೆಯಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ. ಪಾಟೀಲ್ ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ಹಾಗೂ ಮೈಸೂರಿನ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ `ಈಶಾನ್ಯ ಕರ್ನಾಟಕದ ಹೊಸ ಹಾದಿ- ರೇಷ್ಮೆ ಕೃಷಿ~ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯೋಚನೆ, ಯೋಜನೆ ಮತ್ತು ಕಾರ್ಯಪ್ರವೃತ್ತಿಯಿಂದ ಮುನ್ನುಗ್ಗಿದರೆ ರೇಷ್ಮೆ ಕೃಷಿ ಲಾಭದಾಯಕ ಎಂಬುದರಲ್ಲಿ ಸಂಶಯವೇ ಇಲ್ಲ. ಹಳೆ ಮೈಸೂರು ಭಾಗದ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಈಗ ಮೊದಲಿನಂತೆ ಅಲ್ಲಿ ರೇಷ್ಮೆ ಬೆಳೆಯುವುದು ಕಷ್ಟವಾಗಿದೆ. ನಗರೀಕರಣವಾಗುತ್ತಿದೆ. ಎಸ್ಟೇಟ್ ಆಗುತ್ತಿವೆ. ಬೆಳೆಗೆ ರೋಗ ರುಜಿನ ಕಾಟ ಹೆಚ್ಚಾಗಿದೆ. ಆದರೆ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಂಥ ಸಮಸ್ಯೆಯಿಲ್ಲ. ರೈತ ಸಮುದಾಯ ಕಾರ್ಯ ಪ್ರವೃತ್ತರಾದರೆ ಯಶಸ್ಸು ಹೊಂದಬಹುದು ಎಂದು ತಿಳಿಸಿದರು.
ಶಾಸಕ ಸಯ್ಯದ್ ಯಾಸಿನ್ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.