ಬೆಂಗಳೂರು (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಶಾಸಕರು ಹಾಗೂ ಸಚಿವರು ಮೂರು ದಿನಗಳೊಳಗೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮಂಗಳವಾರ ವಿಧಿಸಿರುವ ಗಡುವು ಕುರಿತು ಬುಧವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು `ಪಕ್ಷದ ಹೈಕಮಾಂಡ್ ಸೂಚಿಸಿದರೆ ಸಭೆ ಕರೆಯುವೆ~ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಶಾಸಕಾಂಗ ಪಕ್ಷದ ಕರೆಯಲು ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸಭೆ ಕರೆಯಲು ಪಕ್ಷದ ವರಿಷ್ಠರ ಅನುಮತಿಯ ಅಗತ್ಯವಿದೆ. ಈ ಕುರಿತು ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತೀನ್ ಗಡ್ಕರಿ ಅವರು ಸದ್ಯ ಬೇರೆ ಕಾರ್ಯವೊಂದರಲ್ಲಿ ನಿರತರಾಗಿವುದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ~ ಎಂದು ಹೇಳಿದರು.
ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಯಡಿಯೂರಪ್ಪ ಬಣ ಮಂಗಳವಾರ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ನಿವಾಸದಲ್ಲಿ ಸಭೆ ಸೇರಿ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ ಬಳಿಕ ಸದಾನಂದಗೌಡರಿಗೆ ಸಭೆ ಕರೆಯುವಂತೆ ಮೂರು ದಿನಗಳ ಗಡುವು ವಿಧಿಸಿದ್ದರು. ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ಇದೀಗ ಮತ್ತಷ್ಟು ತೀವ್ರಗೊಂಡಂತಾಗಿದೆ.