ಬೆಂಗಳೂರು: ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆಯಲು ಇಚ್ಛಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈ ಸಂಬಂಧ ಹೈಕೋರ್ಟ್ ಮೊರೆ ಹೋಗ್ದ್ದಿದಾರೆ. ಇದರ ವಿಚಾರಣೆ ಮಂಗಳವಾರದಿಂದ ಆರಂಭಗೊಳ್ಳಲಿದೆ.
ಲೋಕಾಯುಕ್ತ ವಿಶೇಷ ಕೋರ್ಟ್ ಶನಿವಾರ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರು ವಿಶೇಷ ಕೋರ್ಟ್ ಆದೇಶವನ್ನು ಸೋಮವಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
`ನನಗೆ ವಿಪರೀತ ಸಕ್ಕರೆ ಕಾಯಿಲೆ ಇದ್ದು, ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿದ್ದೇನೆ. ಹಲವು ದಿನಗಳಿಂದ ವಿಪರೀತ ಜ್ವರದಿಂದ ನರಳುತ್ತಿದ್ದೇನೆ. ಈಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದೇನೆ.
ವೈದ್ಯರ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುವಷ್ಟು ಆರೋಗ್ಯ ಸ್ಥಿತಿ ಹದಗೆಟ್ಟಿದೆ. ದಯವಿಟ್ಟು ನನಗೆ ಜಾಮೀನು ನೀಡಿ~ ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
`ನಾನು ನಿರಪರಾಧಿ. ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಹಾಗೂ ನನ್ನ ಹೆಸರಿಗೆ ಮಸಿ ಬಳಿಯಬೇಕು ಎನ್ನುವ ಕಾರಣದಿಂದ ನನ್ನ ವಿರುದ್ಧ ವಕೀಲ ಸಿರಾಜಿನ್ ಬಾಷಾ ದೂರು ದಾಖಲು ಮಾಡಿದ್ದಾರೆ. ಆದರೆ ವಿಶೇಷ ಕೋರ್ಟ್ ಇದನ್ನು ಗಣನೆಗೆ ತೆಗೆದುಕೊಳ್ಳದೆ ಜಾಮೀನು ನಿರಾಕರಿಸಿದೆ~ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
`ಮುಖ್ಯಮಂತ್ರಿಗಳಾಗಿದ್ದಾಗ ನಾನು ಹಲವು ಒಳ್ಳೆಯ ಕಾರ್ಯಮಾಡಿದ್ದು, ರಾಜ್ಯದ ಜನತೆಗಾಗಿ ಸಾಕಷ್ಟು ಕಲ್ಯಾಣ ಕಾರ್ಯಗಳನ್ನು ಕೈಗೊಂಡಿದ್ದೇನೆ. ನನ್ನ ಮೇಲಿರುವ ಆರೋಪಗಳು ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಗೆ ಗುರಿ ಮಾಡುವಂಥದ್ದು ಅಲ್ಲ. ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿ~ ಎಂದಿದ್ದಾರೆ.
ನ್ಯಾಯಮೂರ್ತಿ ಬಿ.ವಿ. ಪಿಂಟೊ ಅವರ ಮುಂದೆ ತುರ್ತಾಗಿ ಅರ್ಜಿಯ ವಿಚಾರಣೆ ನಡೆಸುವಂತೆ ಬಿಎಸ್ವೈ ಪರ ವಕೀಲ ರವಿ ಬಿ. ನಾಯಕ್ ಕೋರಿಕೊಂಡರು. ಸೋಮವಾರ ವಿಚಾರಣೆಗೆ ನ್ಯಾಯಮೂರ್ತಿಗಳು ನಿರಾಕರಿಸಿದರು.