ಮೈಸೂರು: ಹೈದರಾಬಾದ್ ತಂಡವು ಭಾನುವಾರ ಮುಕ್ತಾಯವಾದ ದಕ್ಷಿಣ ವಲಯ ಅಂಗವಿಕಲರ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ತಂಡವನ್ನು 9 ರನ್ಗಳಿಂದ ಸೋಲಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ರೈಲ್ವೆ ಮೈದಾನದಲ್ಲಿ ಕರ್ನಾಟಕ ಅಂಗವಿಕಲರ ಕ್ರಿಕೆಟ್ ಸಂಸ್ಥೆ, ಪರಿವರ್ತನಂ ಪಬ್ಲಿಕ್ ಟ್ರಸ್ಟ್, ಕೆಎಂಪಿಕೆ ಟ್ರಸ್ಟ್ ಆಶ್ರಯದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಸತ್ಯನಾರಾಯಣ (15ಕ್ಕೆ3) ಮತ್ತು ಕುಮಾರ್ (18ಕ್ಕೆ2) ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ಹೈದರಾಬಾದ್ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡದ ಬ್ಯಾಟಿಂಗ್ ಪಡೆಯನ್ನು ಕರ್ನಾಟಕದ ಬೌಲರ್ಗಳಾದ ಪ್ರಕಾಶ ಹೊನವಾಡ (17ಕ್ಕೆ4) ಮತ್ತು ಪುಂಡಲೀಕ (17ಕ್ಕೆ2) ಉತ್ತಮ ಬೌಲಿಂಗ್ ಮೂಲಕ 92 ರನ್ಗಳಿಗೆ ನಿಯಂತ್ರಿಸಿದರು.
ಹೈದರಾಬಾದ್ ತಂಡದ ಶ್ರೀನಿವಾಸ್ ಪಂದ್ಯಶ್ರೇಷ್ಠ, ಆಂಧ್ರಪ್ರದೇಶ ತಂಡದ ರೋಸಿರೆಡ್ಡಿ ಉತ್ತಮ ಬೌಲರ್, ತಮಿಳುನಾಡಿನ ಮೊಹಮ್ಮದ್ ಫೈಜಲ್ ಆಲ್ರೌಂಡರ್, ಕರ್ನಾಟಕದ ಪುಂಡಲೀಕ್ ಉತ್ತಮ ಬ್ಯಾಟ್ಸ್ಮನ್ ಮತ್ತು ಪ್ರಕಾಶ್ ಹೊನವಾಡ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.
ಅನಂತಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯದಿಂದ ಹೈದರಾಬಾದ್ ಮತ್ತು ಕರ್ನಾಟಕ ತಂಡಗಳು ಭಾಗವಹಿಸಲು ಅರ್ಹತೆ ಗಳಿಸಿವೆ.ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಐಕ್ಯಾಡ್ ಸದಸ್ಯ ಶಿವಾನಂದ ಗುಂಜಾಳ, ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಅರ್ಜುನ ಪ್ರಶಸ್ತಿ ಪುರಸ್ಕೃತ ಮಹದೇವ ಮತ್ತಿತರರು ಹಾಜರಿದ್ದರು.
ಸಂಕ್ಷಿಪ್ತ ಸ್ಕೋರು: ಹೈದರಾಬಾದ್ 15 ಓವರ್ಗಳಲ್ಲಿ 9 ವಿಕೆಟ್ಗೆ 92 (ಶ್ರೀನಿವಾಸರಾವ್ 25, ಚಿರಂಜೀವಿ 18, ಪ್ರಕಾಶ್ ಹೊನವಾಡ 17ಕ್ಕೆ4, ಪುಂಡಲೀಕ್ 17ಕ್ಕೆ2); ಕರ್ನಾಟಕ: 14 ಓವರ್ಗಳಲ್ಲಿ 83 (ಪುಂಡಲೀಕ 35, ಎಸ್.ಎಲ್. ಮನೋಜ್ 15, ಸತ್ಯನಾರಾಯಣ 15ಕ್ಕೆ3, ಕುಮಾರ್ 18ಕ್ಕೆ2) ಫಲಿತಾಂಶ: ಹೈದರಾಬಾದ್ ತಂಡಕ್ಕೆ 9 ರನ್ಗಳ ಜಯ.