ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆ, ಬಟ್ಟೆಗಾಗಿ ಹೋರಾಟ: ಎಚ್‌ಕೆಆರ್

Last Updated 13 ಜೂನ್ 2011, 8:35 IST
ಅಕ್ಷರ ಗಾತ್ರ

ಚನ್ನಗಿರಿ: ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವೇತನವನ್ನು ಈಚೆಗೆ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಸದ್ದಿಲ್ಲದೇ ಹೆಚ್ಚಿಸಿಕೊಂಡಿದ್ದಾರೆ. ಹಾಗೆಯೇ, ಮಕ್ಕಳ ಉತ್ತಮ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುವಲ್ಲಿ ಪ್ರಮುಖ ಕಾರಣರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನವನ್ನು ಕೂಡಾ ಹೆಚ್ಚಿಸಲು ಸರ್ಕಾರ ಮುಂದಾಗಬೇಕೆಂದು ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಒತ್ತಾಯಿಸಿದರು.

ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಭಾನುವಾರ ಎಐಟಿಯುಸಿ ವತಿಯಿಂದ ನಡೆದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.

ನಮ್ಮ ಹೋರಾಟ ಪಕ್ಷಾತೀತ, ಧರ್ಮಾತೀತವಾಗಿದ್ದು ಕೇವಲ ಹೊಟ್ಟೆಗಾಗಿ, ಬಟ್ಟೆಗಾಗಿ ಮಾತ್ರ ಹೋರಾಟ ಮಾಡುತ್ತಿದ್ದೇವೆ. ರಾಷ್ಟ್ರ ಮತ್ತು ರಾಜ್ಯ ಸೃದೃಢವಾಗಿ ಬೆಳೆಯಲು ಕಾರ್ಯಕರ್ತೆಯರು ಪ್ರಮುಖರಾಗಿದ್ದಾರೆ. ಆದ್ದರಿಂದ ವೇತನ ಹೆಚ್ಚಳ, ಭವಿಷ್ಯನಿಧಿ, ಕಾರ್ಮಿಕರ ವಿಮಾ ಯೋಜನೆ ಜಾರಿಗೆ ತರಬೇಕು.

ನಿವೃತ್ತರಾದವರಿಗೆ ವೇತನದ ಶೇ. 50ರಷ್ಟು ನಿವೃತ್ತಿಧನವನ್ನು ನೀಡಬೇಕು. ಇಎಸ್‌ಐ ಸೌಲಭ್ಯವನ್ನು ನೀಡಿ ಅವರ ಬದುಕು ಇನ್ನಿತರ ಸರ್ಕಾರಿ ನೌಕರರಂತೆ ಹಸನಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

 ಕಾರ್ಯಕ್ರಮ ಉದ್ಘಾಟಿಸಿದ ಸಿಪಿಐ ಎಚ್.ಬಿ. ರಮೇಶ್ ಕುಮಾರ್ ಮಾತನಾಡಿ, ಅನೇಕ ವರ್ಷಗಳಿಂದ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಸಂಘಟನೆಯಲ್ಲಿ ಬಲವಿದೆ. ಹೋರಾಟ ಕೇವಲ ತಮ್ಮ ಹಕ್ಕುಗಳಿಗಾಗಿ ಮಾಡಬೇಕು. ಅಂಗನವಾಡಿಯನ್ನು ಸಮುದಾಯ ಶಾಲೆಯೆಂದು ಮಾಡಿದರೆ ಅವರಿಗೆ ಎಲ್ಲಾ ಮೂಲ ಸೌಲಭ್ಯಗಳು ದೊರಕುತ್ತವೆ ಎಂದು ಅಭಿಪ್ರಾಯಪಟ್ಟರು.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ರಾಜ್ಯ ಸಂಘಟನಾ ಕಾರ್ಯದರ್ಶಿ ಓ. ಪುಟ್ಟಲಕ್ಷ್ಮೀ, ಕಾರ್ಯದರ್ಶಿ ಎಂ.ಬಿ. ಶಾರದಮ್ಮ, ವಿಶಾಲಾಕ್ಷಿ, ಸಂಚಾಲಕ ಮಹಮದ್ ಬಾಷಾ, ಪುಷ್ಪಾಂಜಲಿ, ಎಚ್. ಮಂಜಮ್ಮ, ನೀಲಾಂಬಿಕೆ ಮತ್ತಿತರರು  ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತರಾದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸನ್ಮಾನಿಸಲಾಯಿತು.
ಬುಳುಸಾಗರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಡಿ.ಎಂ. ತಿಪ್ಪಮ್ಮ ಅಧ್ಯಕ್ಷತೆ ವಹಿಸಿದ್ದರು. ಉಮಾದೇವಿ ಪ್ರಾರ್ಥಿಸಿದರು. ಮಾಲಾ ಮೂಲೆಮನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT