ಲೋಕನಾಥಪುರ(ಬಾಳೆಹೊನ್ನೂರು): ಇಲ್ಲಿನ ಭೂ ಬ್ಯಾಂಕಿನಲ್ಲಿ ನಡೆದ ಅವ್ಯವಹಾರಗಳಿಂದಾಗಿ ಸಾಲ ವಸೂಲಾತಿ ಅಥವಾ ನೀಡಿಕೆ ಕೆಲಸ ಸ್ಥಗಿತಗೊಂಡಿದೆ. ಹಾಲಿ ಎಂಟು ಜನ ಸಿಬ್ಬಂದಿಗೆ ಕೆಲಸವಿಲ್ಲ. ನೌಕರರಿಗೆ ಸಂಬಳ ನೀಡುವುದೇ ದುಸ್ತರವಾದ ಸ್ಥಿತಿ ಇಲ್ಲಿದೆ.
ಆದರೂ ಇಲ್ಲಿನ ಅಡಳಿತ ಮಂಡಳಿ ಕಳೆದ ವರ್ಷ ರಾಜ್ಯ ಬ್ಯಾಂಕಿನಿಂದ ಇಬ್ಬರು ನೌಕರರನ್ನು ಮತ್ತು ಸ್ಥಳೀಯ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ಲಕ್ಷಾಂ ತರ ರೂಗಳ ನಷ್ಟವನ್ನು ಉಂಟು ಮಾಡಿದೆ. `ಹೊಟ್ಟೆಗೆ ಹಿಟ್ಟಲ್ಲ ದಿದ್ರೂ ಜುಟ್ಟಿಗೆ ಮಲ್ಲಿಗೆ ಹೂವು~ ಎಂಬಂತಾ ಗಿದೆ ಎಂದು ನಿರ್ದೇಶಕರಾದ ಕೆ. ರಾಮೇಗೌಡ ಮತ್ತು ನಾಗಪ್ಪ ಆರೋಪಿಸಿದ್ದಾರೆ.
ವಿಶೇಷ ಎಂದರೆ ಆಡಳಿತ ಮಂಡ ಳಿಯ ಸಭೆಯ ಗಮನಕ್ಕೆ ಬಾರದೆ ಈ ಮೂವರು ನೌಕ ರರನ್ನು ನೇಮಿಸಿದ್ದು ಈಗ ವಿವಾದಕ್ಕೆ ಎಡೆಮಾಡಿದೆ. ಹೋಬಳಿ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿ ನಂಬಿಕೆ ಹುಟ್ಟಿಸಿದ್ದ ಬ್ಯಾಂಕಿನಲ್ಲಿ ತಮ್ಮ ದುಡಿಮೆಯ ಭಾಗದ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದು ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳು ವಂತಾಗಿದೆ.
ಠೇವಣಿದಾರರ ಸುಮಾರು 1.5ಕೋಟಿ ರೂಗಳಷ್ಟು ಹಣವನ್ನು ವಾಪಸು ನೀಡಲು ಸಾಧ್ಯ ವಾಗದೆ ಇರುವುದು ಇಲ್ಲಿನ ಅಡಳಿತ ಮಂಡಳಿಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದ್ದರೆ ಠೇವಣಿದಾರರಿಗೆ ದಿಕ್ಕೇ ತೋಚದಂತಾಗಿದೆ.
ಬ್ಯಾಂಕ್ ನಷ್ಟದಲ್ಲಿದ್ದರೂ 2008-09ರಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರಿಗೆ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದನ್ನು ಪರಿಶೀಲಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಆ ಸಂದರ್ಭದಲ್ಲಿದ್ದ ಎಂಟು ಜನ ನಿರ್ದೇಶಕರಿಂದ ಚಿನ್ನದ ನಾಣ್ಯಕ್ಕೆ ತಗುಲಿದ ವೆಚ್ಚವನ್ನು ಅವರು ಬ್ಯಾಂಕಿಗೆ ಹಣ ಪಾವತಿ ಮಾಡುವ ತಾರೀಕಿನವರೆಗೂ ಸೇರಿಸಿ ಬಡ್ಡಿ ಸಮೇತ ವಸೂಲಿ ಮಾಡುವಂತೆ ಸೂಚಿಸಿದ್ದರು. ಆದರೆ ಹೇರೂರಿನ ಪುಟ್ಟಪ್ಪ ಹೊರತು ಪಡಿಸಿ ಎಲ್ಲಾ ನಿರ್ದೇಶಕರೂ ಚಿನ್ನದ ನಾಣ್ಯದ ಜೊತೆಗೆ ಬಡ್ಡಿ ಸೇರಿಸಿ ಹಣ ತುಂಬಿದ್ದಾರೆ.
ಕರಿಮನೆ ಬ್ಯಾಂಕ್ ತಾಲ್ಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯ ವ್ಯಾಪ್ತಿ ಹೊಂದಿರುವ ಕಾರಣ ಬ್ಯಾಂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗೌರವ ಧನ ಪಡೆಯುವಂತಿಲ್ಲ. ಆದರೆ ಇಲ್ಲಿ 2007ರಿಂದ2010ರ ವರೆಗಿನ ಅವಧಿಯಲ್ಲಿ ನಿಯಮವನ್ನು ಮೀರಿ ಆಡಳಿತ ನಡೆಸಿದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು 10ಸಾವಿರದಿಂದ 15 ಸಾವಿರದ ವರೆಗೆ ಗೌರವ ಧನ ಪಡೆದಿರುವುದು ಬೆಳಕಿಗೆ ಬಂದಿದೆ.
ಈ ಮೊತ್ತವನ್ನು ಬಡ್ಡಿ ಸಮೇತ ವಸೂಲು ಮಾಡವುದು ತಪ್ಪಿದಲ್ಲಿ ಅಂದಿನ ವ್ಯವಸ್ಥಾಪಕರಿಂದಲೇ ವಸೂಲಿ ಮಾಡುವಂತೆ ವರದಿಯಲ್ಲಿ ಸೂಚಿಸಲಾಗಿದೆ.
ನಾಳೆ- ಸಾಲ ತೀರಿಸಿದ್ರೆ ಬ್ಯಾಂಕ್ ಸಹಜ ಸ್ಥಿತಿಗೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.