ತುಮಕೂರು: ಜಿಲ್ಲಾ ಆಸ್ಪತ್ರೆಗೆ ಬಂದ ಗರ್ಭಿಣಿಗೆ ಚಿಕಿತ್ಸೆ ಸಿಗದೆ ಮಗು ಸಾವಿಗೀಡಾದ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲ್ಲೂಕು ಅಳಿಲುಘಟ್ಟದ ಗರ್ಭಿಣಿ ರಾಮಕ್ಕ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬಂದಿಲ್ಲ. ಬೆಳಿಗ್ಗೆ 8 ಗಂಟೆಯವರೆಗೂ ಆಸ್ಪತ್ರೆ ಯಲ್ಲೇ ಒದ್ದಾಡಿದ್ದಾರೆ.
ಹೊಟ್ಟೆಯಲ್ಲಿ ಮಗುವಿನ ಚಲನೆ ನಿಂತ ಅನುಭವವಾಗಿ ಗರ್ಭಿಣಿ ಮನೆಯವರು ಆಕೆಯನ್ನು ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಿದಾಗ ಮಗು ಸಾವಿಗೀಡಾಗಿರುವುದು ತಿಳಿದುಬಂದಿದೆ. ಇದರಿಂದ ಕಂಗಾಲಾದ ಗರ್ಭಿಣಿ ಕುಟುಂಬದ ನಾಲ್ಕೈದು ಮಂದಿ ಜಿಲ್ಲಾ ಆಸ್ಪತ್ರೆ ಮುಂದೆ ಶುಕ್ರವಾರ ಬೆಳಿಗ್ಗೆ ಧರಣಿ ಕುಳಿತರು.
ಧರಣಿಯಿಂದ ಕಂಗಾಲಾದ ಆಸ್ಪತ್ರೆ ಸಿಬ್ಬಂದಿ ಕೂಡಲೇ ರಾಮಕ್ಕ ಅವರನ್ನು ದಾಖಲಿಸಿಕೊಂಡರು.
ಸ್ಥಳಕ್ಕೆ ಬಂದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶ್ರೀಕಾಂತ್ ಬಾಸೂರ್ ಖಾಸಗಿ ಕೇಂದ್ರದಲ್ಲಿ ತೆಗೆಸಿಕೊಂಡು ಬಂದಿದ್ದ ಸ್ಕ್ಯಾನಿಂಗ್ ನೋಡಿ ಮಗು ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿಲ್ಲ. ನಾಲ್ಕೈದು ದಿನದ ಹಿಂದೆಯೇ ಸಾವಿಗೀಡಾಗಿದೆ ಎಂದು ವರದಿ ಹೇಳುತ್ತಿದೆ ಎಂದು ಧರಣಿ ನಿರತರನ್ನು ಸಮಾಧಾನ ಪಡಿಸಿದರು.
ತೀರಾ ಕಡುಬಡವರಂತೆ ಕಂಡುಬರುತ್ತಿದ್ದ ಗರ್ಭಿಣಿ ಕುಟುಂಬದವರು ಬೇಗ ಸತ್ತ ಮಗುವಾದರೂ ಈಚೆ ತೆಗೆಯಿರಿ ಎಂದು ಅಂಗಲಾಚಿಸಿದರು. ಹನ್ನೊಂದು ಗಂಟೆ ಸುಮಾರಿಗೆ ಸತ್ತ ಮಗುವನ್ನು ಹೊರಗೆ ತೆಗೆಯಲಾಯಿತು.