ಹೊಳಲ್ಕೆರೆ: ಸಿದ್ಧಾಂತ ಇರುವಲ್ಲಿ ಹೆಚ್ಚು ಕಾಲ ಭಕ್ತರಿರುತ್ತಾರೆ ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ತಾಲ್ಲೂಕಿನ ಈಚಘಟ್ಟದಲ್ಲಿ ಭಾನುವಾರ ನಡೆದ 23ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶದಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕುಲಕ್ಕೊಬ್ಬ ಸ್ವಾಮೀಜಿ ಮಾಡಿದರೆ ನಿಮಗೆ ಭಕ್ತರು ಎಲ್ಲಿರುತ್ತಾರೆ ಎಂದು ಕೆಲವರು ಆಪಾದನೆ ಮಾಡಿದರು. ಆದರೆ, ಮುರುಘಾಮಠ ಭಕ್ತರಿಗಿಂತ ಹೆಚ್ಚಾಗಿ ಸಿದ್ಧಾಂತಗಳ ಜತೆ ಬೆಳೆದುಬಂದಿದೆ. ನಾನು ಕೇವಲ ಮಠಕ್ಕಾಗಿ ಮಠಾಧೀಶನಲ್ಲ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದು, ಸಮಾಜದಲ್ಲಿ ಏನಾದರೊಂದು ಕ್ರಾಂತಿ ಮಾಡುವ ಮನಸ್ಸು ನನ್ನದು. ನನಗೆ ಆಡಂಬರ ಬೇಕಿಲ್ಲ. ದೊಡ್ಡ ಮಠದ ಮಠಾಧೀಶ ಎನ್ನುವ ಅಹಂಕಾರವೂ ನನಗಿಲ್ಲ ಎಂದು ತಿಳಿಸಿದರು.
ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಯಾವುದೇ ವ್ಯಕ್ತಿ ಅಥವಾ ಸಮಾಜ ಸಾಧನೆ ಮಾಡಲು ಗುರು ಮತ್ತು ಗುರಿ ಇರಬೇಕು. ಕುಂಚಿಟಿಗರು ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಠಗಳಿಗೆ ್ಙ 350 ಕೋಟಿ ನೀಡಿದ್ದರು. ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಜನಾಂಗಕ್ಕೂ ಸಾಮಾಜಿಕ ನ್ಯಾಯ ಒದಗಿಸಿದರು ಎಂದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ತಾಲ್ಲೂಕನ್ನು ಸೇರ್ಪಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ. ಅದರಂತೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಿ 1.05 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಚನ್ನಗಿರಿ ಮತ್ತು ನಮ್ಮ ತಾಲ್ಲೂಕಿಗೆ ಒಂದೂವರೆ ಟಿಎಂಸಿ ನೀರು ಹರಿಸಲು ನೀರಾವರಿ ಸಚಿವರು ಸಮ್ಮತಿಸಿದ್ದು, ಈಗಾಗಲೇ ್ಙ 1 ಕೋಟಿ ಬಿಡುಗಡೆಯಾಗಿದೆ ಎಂದರು.
ಮಾಜಿ ಶಾಸಕ ಪಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕುಂಚಿಟಿಗ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಹನುಂತನಾಥ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ಸಂಸತ್ ಸದಸ್ಯ ಜನಾರ್ದನ ಸ್ವಾಮಿ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಎಂ. ನೀಲಯ್ಯ, ಲಿಂಗಮೂರ್ತಿ, ಕುಂಚಿಟಿಗ ಮಹಾಮಂಡಲದ ಅಧ್ಯಕ್ಷ ದೇವರಾಜಯ್ಯ, ಮಾಜಿ ಶಾಸಕ ಎಚ್. ಆಂಜನೇಯ, ಜಿ.ಎಸ್. ಮಂಜುನಾಥ್, ಪಿ.ಆರ್. ಶಿವಕುಮಾರ್, ಇಂದಿರಾ ಕಿರಣ್, ಶಿವಣ್ಣ, ರಘುನಾಥ್, ಮುರುಳೀಧರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.