ನವದೆಹಲಿ (ಐಎಎನ್ಎಸ್): ದೇಶದಾದ್ಯಂತ ನಡೆಸಲಾಗಿರುವ ಹೊಸ ಔಷಧಿಗಳ ಪ್ರಯೋಗ ಮತ್ತು ಅದರಿಂದಾಗಿರುವ ಅಡ್ಡ ಪರಿಣಾಮಗಳ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ನ್ಯಾಯಮೂರ್ತಿ ಆರ್. ಎಂ. ಲೋಧ ಮತ್ತು ಅನಿಲ್ ಆರ್. ದವೆ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರದ ಜತೆಗೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ನೋಟಿಸ್ ಜಾರಿಗೊಳಿಸಿದೆ.
ಔಷಧ ಪ್ರಯೋಗದ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆಯೇ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ವಿಶೇಷ ಕಾಯ್ದೆಯನ್ನು ರೂಪಿಸಿವೆಯೇ ಎಂದು ನ್ಯಾಯಪೀಠ ಕೇಳಿದೆ.
ಹೊಸ ಔಷಧಗಳು ಮತ್ತು ಸಂಶೋಧನೆಗಳು ಮನುಷ್ಯನ ಮೇಲೆ ನಡೆಯುತ್ತಿರುವುದರಿಂದ ಜನರ ಪ್ರಾಣದ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ. ಈ ಪ್ರಯೋಗಗಳ ಹೆಸರಿನಲ್ಲಿ ವೈದ್ಯರು ಮತ್ತು ಔಷಧ ಕಂಪೆನಿಗಳು ಅವ್ಯವಹಾರ ನಡೆಸುತ್ತಿವೆ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಹೊಸ ಔಷಧಗಳ ಪ್ರಯೋಗದ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವು ಇಲ್ಲ ಎಂಬ ಮಧ್ಯಪ್ರದೇಶ ಸರ್ಕಾರದ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರೇ ಪ್ರಯೋಗ ನಡೆಸುವುದರಿಂದ ತನಗೆ ಗೊತ್ತಿಲ್ಲ ಎಂದು ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ರೋಗಿಗಳ ಅನುಮತಿ ಪಡೆಯದೆ ಮತ್ತು ಅವರಿಗೆ ತಿಳಿಸದೆ ಮಧ್ಯಪ್ರದೇಶದಲ್ಲಿ ಹೊಸ ಔಷಧಗಳ ಪ್ರಯೋಗ ಮಾಡಲಾಗುತ್ತಿದೆ ಎಂದು ದೂರಿ ಸ್ವಾಸ್ಥ ಅಧಿಕಾರ ಮಂಚ್ ಎಂಬ ಸ್ವಯಂ ಸೇವಾ ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ.