ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿ ಕೊರತೆ ಇದ್ದು, ನಗರದ ಲಿಂಗಸುಗೂರು ರಸ್ತೆಯ ಪಕ್ಕ ನೂತನವಾಗಿ ನಿರ್ಮಿಸಿದ ಕಾಲೇಜು ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಕಾಲೇಜಿನಿಂದ ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೊಸದಾಗಿ ನಿರ್ಮಾಣವಾದ ಕಾಲೇಜು ಕಟ್ಟಡಕ್ಕೆ ಸ್ಥಳಾಂತರಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಿದರು.
ಸದ್ಯ ಈಗ ಬಿಎಸ್ಎನ್ಎಲ್ ಕಚೇರಿ ಹತ್ತಿರ ಇರುವ ಕಾಲೇಜು ಕಟ್ಟಡದ ಕೊಠಡಿಗಳ ಸಂಖ್ಯೆ, ತರಗತಿಗಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಕೊಠಡಿಗಳ ಕೊರತೆ ಇದೆ. ಹೀಗಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಹೊಸ ಕಟ್ಟಡದಲ್ಲಿಯೂ ಕಡಿಮೆ ಕೊಠಡಿಗಳಿದ್ದರೂ ಸಹ ಕೆಲ ತರಗತಿ ವಿದ್ಯಾರ್ಥಿಗಳನ್ನು ಆ ಕಾಲೇಜಿಗೆ ಸ್ಥಳಾಂತರಿಸುವುದರಿಂದ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಹೇಳಿದರು.
ಈ ಬಗ್ಗೆ ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ಅವರೊಂದಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಬಗ್ಗೆ ಬಹಳ ಹೊತ್ತು ಸಮಸ್ಯೆ ಹೇಳಿಕೊಂಡರು.
ಕೊನೆಗೆ ಇನ್ನು ಹತ್ತು ದಿನದಲ್ಲಿ ಕಾಲೇಜು ಆರಂಭಕ್ಕೆ ಗಮನಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ ಅನ್ಬುಕುಮಾರ ಅವರು ದೂರವಾಣಿ ಮೂಲಕ ಕಾಲೇಜಿನ ಪ್ರಾಚಾರ್ಯರಿಗೆ ಮಾಹಿತಿ ನೀಡಿದರು.
ಅಲ್ಲದೇ ಸ್ವಾತಂತ್ರ್ಯೋತ್ಸವವನ್ನು ಕಾಲೇಜಿನ ನೂತನ ಕಟ್ಟಡದಲ್ಲಿ ಆಚರಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ವಿದ್ಯಾರ್ಥಿಗಳು ಖುಷಿಯಾಗಿ ಪ್ರತಿಭಟನೆ ಕೈ ಬಿಟ್ಟರು.
ಪ್ರತಿಭಟನೆಯ ನೇತೃತ್ವವನ್ನು ಬಸವರಾಜ ಬಿಚ್ಚಾಲಿ, ರಾಘವೇಂದ್ರ, ಸಯ್ಯದ್, ಅಕ್ರಮ್, ಪವಿತ್ರ, ರಜನಿ, ಜಯಶ್ರೀ ಸೇರಿದಂತೆ ಅನೇಕ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಪ್ರಾಚಾರ್ಯರು.