ಹಾಸನ: `ಹೊಸ ಕ್ಯಾರಿ ಓವರ್ ಪದ್ಧತಿಯನ್ನು ರದ್ದು ಮಾಡಿ, 2012-13ಕ್ಕಿಂತ ಹಿಂದಿನ ಪದ್ಧತಿಯನ್ನೇ ಜಾರಿ ಮಾಡಬೇಕು' ಎಂದು ಆಗ್ರಹಿಸಿ ಶುಕ್ರವಾರ ಶ್ರೀರಾಮ ಸೇನೆಯ ವಿದ್ಯಾರ್ಥಿ ಘಟಕದವರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನ್ಯಾಯಾಲಯ ಹತ್ತು ವಿಷಯಗಳಿಗೆ ಕ್ಯಾರಿ ಓವರ್ಗೆ ಅವಕಾಶ ಕೊಟ್ಟಿದ್ದರೂ ರಾಜ್ಯ ಸರ್ಕಾರ ಅದನ್ನು ನಾಲ್ಕು ವಿಷಯಗಳಿಗೆ ಇಳಿಸಿದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಕ್ಯಾರಿ ಓವರ್ಗೆ ಅವಕಾಶ ನೀಡದ ಕಾರಣ ಅನುತ್ತೀರ್ಣಗೊಂಡ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ಈಚೆಗೆ ನಡೆದಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಇಂಥ ಅನೇಕ ಘಟನೆಗಳು ನಡೆದಿರುವುದು ವರದಿಯಾಗಿದೆ. ಹೊಸ ಪದ್ಧತಿಯನ್ನು ರದ್ದು ಮಾಡದಿದ್ದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು' ಎಂದು ಪ್ರತಿಭಟನಾಕಾರರು ನುಡಿದರು.
ಎಂ.ಜಿ ರಸ್ತೆಯಲ್ಲಿರುವ ಸೇನೆಯ ಕಚೇರಿ ಮುಂದಿನಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಆರ್.ಸಿ. ರಸ್ತೆ, ಹೇಮಾವತಿ ಪ್ರತಿಮೆ ಮುಂಭಾಗ,ಎನ್.ಆರ್. ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಘೋಷಣೆಗಳನ್ನು ಕೂಗಿದರು. ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್ ಇತರರು ಹಾಜರಿದ್ದರು.