ಶಿರಸಿ: ರೈತರು ಹೊಸ ತಾಂತ್ರಿಕತೆ ಅಳವ ಡಿಸಿಕೊಂಡು ಬೆಳೆಗಳ ಕೊಯ್ಲಿನ ನಂತ ರದ ನಷ್ಟ ಕಡಿತಗೊಳಿಸಿಕೊಳ್ಳಬೇಕು. ಸಾರ್ವಜನಿಕ ದಾಸ್ತಾನು ಮಳಿಗೆಗಳ ಸದುಪಯೋಗ ಪಡೆದುಕೊಂಡರೆ ಉತ್ಪನ್ನದ ಗುಣಮಟ್ಟ ಸಹ ಕಾಯ್ದು ಕೊಳ್ಳಬಹುದಾಗಿದೆ ಎಂದು ಕೇಂದ್ರೀಯ ಉಗ್ರಾಣ ನಿಗಮದ ಧಾರವಾಡ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಕೆ.ವಿ.ಮುಳಗುಂದ ಸಲಹೆ ನೀಡಿದರು.
ಅವರು ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯ್ದ ರೈತರಿಗೆ ಆಯೋಜಿಸಿರುವ ಎರಡು ದಿನಗಳ `ಕೊಯ್ಲಿನ ನಂತರದ ನಷ್ಟ ಮಿತಿಗೊಳಿಸುವ ತಾಂತ್ರಿಕತೆ ಮತ್ತು ಉಗ್ರಾಣ ಕಾಯಿದೆ~ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರೀಯ ಉಗ್ರಾಣ ನಿಗಮ ದೇಶದ ವಿವಿಧ ಭಾಗಗಳಲ್ಲಿ 494 ದಾಸ್ತಾನು ಮಳಿಗೆ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರೀಯ ನಿಗಮದ ಉಗ್ರಾಣ ಸ್ಥಾಪನೆಗೆ ರೈತರಿಂದ ಬೇಡಿಕೆ ಬಂದರೆ ಪರಿಶೀಲಿಸಲಾಗುವದು ಎಂದರು.
ವೈಜ್ಞಾನಿಕ ದಾಸ್ತಾನು ಮಳಿಗೆ ರೈತರಿಗೆ ಬೆಳೆ ಬರುವ ವೇಳೆಯಲ್ಲಿ ಮಾರುಕಟ್ಟೆಯಲ್ಲಿನ ಅತಿ ಸರಬರಾಜಿನಿಂದ ಸಂಗ್ರಹಣೆ ಮಾಡಲಾಗದ ಸಂದರ್ಭ ಎದುರಾದರೆ ಉತ್ಪನ್ನಗಳನ್ನು ಅನಿವಾರ್ಯವಾಗಿ ಮಾರಾಟ ಮಾಡುವ ತೊಂದರೆ ತಪ್ಪಿ ಸುತ್ತದೆ. ದಾಸ್ತಾನು ಮಳಿಗೆ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಉತ್ತಮ ದರ್ಜೆ ಖಾತ್ರಿಗೊಳಿಸುತ್ತದೆ ಎಂದು ಹೇಳಿದರು.
ಸಾರ್ವಜನಿಕ ದಾಸ್ತಾನು ಮಳಿಗೆಯಲ್ಲಿ ದಾಸ್ತಾನು ಮಾಡಿದ ಮತ್ತು ಅಲ್ಲಿಂದ ರವಾನಿಸಿದ ಬಗ್ಗೆ ಸೂಕ್ತ ದಾಖಲೆ ಸಿಗುತ್ತವೆ. ಸಂಗ್ರಹಿಸಿದ ಆಹಾರ ಧಾನ್ಯಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ನಷ್ಟವಾದರೆ ಅದು ತೀರಾ ಕನಿಷ್ಠ ಪ್ರಮಾಣದಲ್ಲಿರುತ್ತದೆ. ಸಾರ್ವಜನಿಕ ಮಳಿಗೆಗಳನ್ನು ಸಾರ್ವ ಜನಿಕ ಹಿತದೃಷ್ಟಿಯಿಂದ ವ್ಯಾವಹಾರಿಕ ತತ್ವಗಳ ಆಧಾರದ ಮೇಲೆ ನಡೆಸ ಲಾಗುತ್ತದೆ. ಇವು ಲಾಭದ ಉದ್ದೇಶ ಹೊಂದಿರುವದಿಲ್ಲ.
ವೈಜ್ಞಾನಿಕ ವಿಧಾನ ದಲ್ಲಿ ದಾಸ್ತಾನು ಒದಗಿಸಲು ಸಂಗ್ರ ಹಣಾ ಶುಲ್ಕ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು. ವೇದಿಕೆ ಯಲ್ಲಿ ಕೃಷಿ ಇಲಾಖೆ ಅಧಿಕಾರಿ ಶಿವ ಪ್ರಸಾದ ಗಾಂವಕರ, ಕೃಷಿ ವಿಜ್ಞಾನ ಕೇಂದ್ರದ ವಿನುತಾ ಮುಕ್ತಾಮಠ, ಕೇಂದ್ರ ಉಗ್ರಾಣ ನಿಗಮ ಪ್ರಾದೇಶಿಕ ಕಚೇರಿಯ ಡಿ.ಕೆ.ಸಲೀಂ ಉಪಸ್ಥಿ ತರಿದ್ದರು.